ಹೊಸದಿಗಂತ ವರದಿ ಕುಶಾಲನಗರ:
ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಒಂಟಿ ಸಲಗವೊಂದು ಹಗಲು ವೇಳೆಯಲ್ಲೇ ಸಂಚರಿಸುತ್ತಿದ್ದು, ಗ್ರಾಮದ ಸೀತಮ್ಮ ಎಂಬವರ ಕೊಟ್ಟಿಗೆಗೆ ದಾಳಿ ಮಾಡಿ ಧ್ವಂಸಗೊಳಿಸಿದ್ದಲ್ಲದೆ, ಅಲ್ಲಿದ್ದ ಕರುವನ್ನು ತುಳಿದ ಪರಿಣಾಮ ಅದರ ಸೊಂಟ ಮುರಿದಿದೆ.
ಮಂಗಳವಾರ ಬೆಳಗಿನ ಜಾವ ಕೊಟ್ಟಿಗೆ ಕಡೆಗೆ ಕಾಡಾನೆ ಬರುವ ರಭಸಕ್ಕೆ ಕೊಟ್ಟಿಗೆಯಲ್ಲಿದ್ದ ಹಸು ಹಗ್ಗ ಸಮೇತ ಓಡಿ ಹೋಗಿದೆ. ಅದರೆ ಅಲ್ಲಿದ್ದ ಕರುವನ್ನು ಕಾಡಾನೆ ತುಳಿದಿದೆ.
ಅಲ್ಲದೆ ಈ ವ್ಯಾಪ್ತಿಯ ಅನೇಕ ರೈತರ ಜಮೀನಿಗೆ ಕಾಡಾನೆ ದಾಳಿ ಮಾಡಿರುವುದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಈ ಒಂಟಿ ಸಲಗವು ಹಗಲು ವೇಳೆಯಲ್ಲೇ ಕಾಣಿಸಿಕೊಳ್ಳುತ್ತಿರುವುದರಿಂದ ಈ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆಯವರು ಈ ಒಂಟಿ ಸಲಗವನ್ನು ಅರಣ್ಯಕ್ಕೆ ಅಟ್ಟುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.



