ಹೊಸದಿಗಂತ ಡಿಜಿಟಲ್ ಡೆಸ್ಕ್ :
ರೈಲ್ವೆ ಹಳಿಗೆ ದೊಡ್ಡ ಗಾತ್ರದ ಮರ ಬಿದ್ದದ್ದನ್ನು ಗಮನಿಸಿದ 70 ವರ್ಷದ ಮಹಿಳೆಯೊಬ್ಬರು ಕೆಂಪು ವಸ್ತ್ರ ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಸಮಯಪ್ರಜ್ಞೆ ತೋರಿಸಿದ್ದಾರೆ. ಈ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಪಡೀಲ್ ಜೋಕಟ್ಟೆ ಮಧ್ಯೆ ಇರುವ ಪಚ್ಚನಾಡಿ ಸಮೀಪದ ಮಂದಾರದಲ್ಲಿ ಮಾರ್ಚ್ 21 ರಂದು ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ನಗರದ ಕುಡುಪು ಆಯರ ಮನೆ ನಿವಾಸಿ ಚಂದ್ರಾವತಿ ಎಂಬುವರೇ ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದ ಮಹಿಳೆ.
ಮಾರ್ಚ್ 21ರಂದು ಮಧ್ಯಾಹ್ನ 2.10ರ ಸುಮಾರಿಗೆ ರೈಲ್ವೆ ಹಳಿಗೆ ಮರ ಉರುಳಿತ್ತು. ಅದೇ ಸಂದರ್ಭದಲ್ಲಿ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ ರೈಲು ಚಲಿಸುತಿತ್ತು. ಇದನ್ನು ಗಮನಿಸಿದ ಚಂದ್ರಾವತಿ ಅವರು ಮನೆಯಲ್ಲಿದ್ದ ಕೆಂಪು ಬಟ್ಟೆಯನ್ನು ತಂದು ರೈಲು ಬರುವ ಸಮಯದ ವೇಳೆ ಪ್ರದರ್ಶಿಸಿ ಲೋಕೋಪೈಲೆಟ್ ಗಮನ ಸೆಳೆದಿದ್ದಾರೆ. ಅಪಾಯವನ್ನು ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲು ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೆ ಇಲಾಖೆಯ ಕಾರ್ಮಿಕರು ಸೇರಿ ರೈಲು ಹಳಿ ಮೇಲೆ ಬಿದ್ದಿದ್ದ ಮರವನ್ನು ತೆರವು ಮಾಡಿದ್ದಾರೆ.
ಎಲ್ಲರ ನೆರವಿನಿಂದ ಮರ ತೆರವು ಮಾಡಿ ಸುಗಮ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸುಮಾರು ಅರ್ಧ ತಾಸು ರೈಲು ನಿಲ್ಲಿಸಲಾಗಿತ್ತು.