ಹೊಸ ದಿಗಂತ ವರದಿ ವಿಜಯಪುರ:
ಪಿಎಸ್ಐ ಹಾಗೂ ಪಿಎಸ್ಐ ಸಹೋದರ ಸುಳ್ಳು ಆರೋಪ ಮಾಡಿ, ಹಣದ ಬೇಡಿಕೆ ಇಟ್ಟು, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಾನು ಬಡವ ಪೊಲೀಸರಿಗೆ ಎಲ್ಲಿಂದ ಹಣ ಕೊಡಲಿ ಎಂದು ಯುವಕ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾನೆ.
ನಗರದ ಸೋಮನಾಥ ನಾಗಮೋತಿ ಮೃತಪಟ್ಟ ಯುವಕ.
ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್’ಐ ಸೋಮೇಶ ಗೆಜ್ಜಿ, ಸಹೋದರ ಚೇತನ್ ಗೆಜ್ಜಿ, ರವಿ ದೇಗಿನಾಳ, ಸಂತೋಷ ದೇಗಿನಾಳ ಹೆಸರಲ್ಲಿ ಯುವಕ ಸೋಮನಾಥ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ 5 ದಿನದಿಂದ ನಾಪತ್ತೆಯಾಗಿದ್ದ ಸೋಮನಾಥನ ಶವ ಕೊಲ್ಹಾರ ಪಟ್ಟಣದ ಕೃಷ್ಣಾ ನದಿ ಪಾತ್ರದಲ್ಲಿ ಪತ್ತೆಯಾಗಿದೆ.
ಅಲ್ಲದೆ ಯುವಕ ಸೋಮನಾಥನ ಮೇಲೆ ಪಿಎಸ್’ಐ ಸೋಮೇಶ ಗೆಜ್ಜಿ ವಿನಾಕಾರಣ ಆರೋಪ ಹೊರಿಸಿ, ಹಣದ ಬೇಡಿಕೆ ಇಟ್ಟು, ಕಿರುಕುಳ ನೀಡಿದ್ದಾರೆ ಎಂದು ಯುವಕ ಸೋಮನಾಥ ಫೇಸ್ ಬುಕ್ ಲೈವ್ ನಲ್ಲಿ ಭೀತಿಗೊಂಡು, ನೊಂದು ಮಾತಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ಕುರಿತು ಇನ್ನಿಲ್ಲದ ಚರ್ಚೆಗೆ ಗ್ರಾಸವಾಗಿದೆ.