ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೂದಲು ಎನ್ನುವುದು ಎಲ್ಲರ ಸೌಂದರ್ಯದ ಪ್ಲಸ್ ಪಾಯಿಂಟ್. ಆದರೆ ಆಧುನಿಕ ಜೀವನ, ವಿವಿಧ ರೀತಿಯ ಮಾಲಿನ್ಯಗಳು, ರಾಸಾಯನಿಕ ಮಿಶ್ರಿತ ಆಹಾರಗಳು, ಮಾಲಿನ್ಯಕಾರಕ ನೀರು ಇತ್ಯಾದಿಗಳಿಂದ ಅಕಾಲಿಕವಾಗಿ ಕೂದಲುಗಳು ಉದುರುತ್ತವೆ.
ಕೆಲವರು ಕೂದಲು ಉದುರುವಿಕೆಯನ್ನು ಸಹಜವಾಗಿ ಸ್ವೀಕರಿಸುತ್ತಾರೆ. ಇನ್ನು ಕೆಲವರು ಬೇಸರ ವ್ಯಕ್ತಪಡಿಸುತ್ತಿರುತ್ತಾರೆ.ಇದೇ ರೀತಿ, ಕೇರಳದ ಕೋಯಿಕ್ಕೋಡ್ನಲ್ಲಿ ಕೂದಲು ಉದುರುವಿಕೆ ಸಮಸ್ಯೆಗೆ ಬೇಸತ್ತ ಯುವಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಹೌದು, .ಕೇರಳದ ಕೋಝಿಕೋಡ್ ಜಿಲ್ಲೆಯ ಅಥೋಲಿ ಗ್ರಾಮದ ನಿವಾಸಿ, 29 ವರ್ಷದ ಪ್ರಶಾಂತ್ ಎಂಬಾತ ಬಹಳ ಸಮಯದಿಂದ ಔಷಧಿ ಸೇವಿಸಿದರೂ ಹುಬ್ಬು ಸೇರಿ ದೇಹದ ಇತರೆ ಭಾಗದಲ್ಲಿ ಕೂದಲು ಉದುರಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್ ನೋಟ್ನಲ್ಲಿ ತನಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧವೇ ಆತ ದೂಷಿಸಿದ್ದಾನೆ.
ತನ್ನ ಸಾವಿಗೆ ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರ. ಈ ಸಮಸ್ಯೆಯಿಂದ ತಾನು ಮನೆಯಿಂದ ಹೊರಬರಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಪ್ರಶಾಂತ್ ಅವರು 2014 ರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಂಡರೂ ಹುಬ್ಬುಗಳು ಮತ್ತು ಮೂಗಿನೊಳಗಿನ ಕೂದಲನ್ನು ಕಳೆದುಕೊಂಡರು. ಕೂದಲು ಉದುರುವುದು ನಿಲ್ಲುತ್ತದೆ ಎಂಬ ಭರವಸೆಯಿಂದ ಅವರು 2020 ರವರೆಗೆ ಅಂದರೆ 6 ವರ್ಷಗಳ ಕಾಲ ಔಷಧಿಗಳನ್ನು ತೆಗೆದುಕೊಂಡ ಎಂದು ತಿಳಿದುಬಂದಿದೆ.
ಆದರೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೂ ತನ್ನ ಕಣ್ಣಿನ ಹುಬ್ಬಿನ ಕೂದಲು ಸಹ ಕಡಿಮೆಯಾಗುತ್ತಿತ್ತು. ಇದರಿಂದ ತನ್ನನ್ನು ಮದುವೆಯಾಗಲು ಸಹ ಯಾರೂ ಮುಂದಾಗುತ್ತಿಲ್ಲ. ಈ ಹಿನ್ನೆಲೆ ಬೇಸತ್ತು ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದೂ ಆತ್ಮಹತ್ಯೆ ಮಾಡಿಕೊಂಡ ಯುವಕ ಪ್ರಶಾಂತ್ ಡೆತ್ನೋಟ್ನಲ್ಲಿ ಬರೆದುಕೊಂಡಿದ್ದಾನೆ.
ಪ್ರಶಾಂತ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ರಫೀಕ್ ವಿರುದ್ಧ ಅಥೋಲಿ ಪೊಲೀಸರಿಗೆ ದೂರು ನೀಡಿದ್ದರೂ, ತನಿಖೆಯಿಂದ ತಾವು ತೃಪ್ತರಾಗಿಲ್ಲ ಎಂದು ಪ್ರಶಾಂತ್ ಕುಟುಂಬಸ್ಥರು ಹೇಳಿದ್ದಾರೆ. ಈ ನಡುವೆ, ಮೇಲ್ನೋಟಕ್ಕೆ ಯಾವುದೇ ಅಪರಾಧ ಪತ್ತೆಯಾಗಿಲ್ಲ ಎಂದು ಅಥೋಲಿ ಎಸ್ಐ ತಿಳಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ. ಅಲ್ಲದೆ,, ನಾವು ವೈದ್ಯರನ್ನು ವಿಚಾರಣೆ ನಡೆಸಿದ್ದು, ಆದರೆ ಅವರನ್ನು ಆರೋಪಿ ಎಂದು ಪರಿಗಣಿಸಿಲ್ಲ ಎಂದು ಹೇಳಿದ್ದಾರೆ. ಹಾಗೂ, ಪೋಸ್ಟ್ಮಾರ್ಟಂ ವರದಿಗಾಗಿ ನಾವಿನ್ನೂ ಕಾಯುತ್ತಿದ್ದೇವೆ ಎಂದೂ ಪೊಲೀಸರು ಹೇಳಿದ್ದಾರೆ.