ಹೊಸದಿಗಂತ ವರದಿ ಮಡಿಕೇರಿ:
ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಾಪೋಕ್ಲು ಸಮೀಪದ ಕಕ್ಕಬ್ಬೆಯ ತಡಿಯಂಡಮೋಳು ಬೆಟ್ಟದಲ್ಲಿ ನಡೆದಿದೆ
ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತಪಟ್ಟ ಯುವಕ.
ಬೆಂಗಳೂರಿನ ಜೆಪಿ ನಗರದ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್ ತನ್ನ 5 ಜನ ಸಹೋದ್ಯೋಗಿಗಳೊಂದಿಗೆ ಭಾನುವಾರ ಬೆಳಗ್ಗೆ ತಡಿಯಂಡಮೋಳು ಬೆಟ್ಟ ವೀಕ್ಷಣೆಗೆ ತೆರಳಿದ್ದರು.
ಬೆಟ್ಟದ ಮೇಲೆ ತಲುಪಿದಾಗ ತೀವ್ರವಾದ ಎದೆನೋವು ಕಾಣಿಸಿಕೊಂಡ ಬಳಿಕ ಜತಿನ್ ಕುಮಾರ್ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕಾಡು ಮುಳ್ಳುಗಳಿಂದ ಕೂಡಿದ್ದ ಕಚ್ಚಾರಸ್ತೆಯಲ್ಲಿ ಹರಸಾಹಸಪಟ್ಟು ಬೆಟ್ಟದ ಮೇಲಿಂದ ಮೃತ ದೇಹವನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತ ಯುವಕನ ಕುಟುಂಬಸ್ಥರು ಬಂದ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.