ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಹಗಲು ರಾತ್ರಿ ಎನ್ನದೇ ಇಡೀ ದಿನ ನದಿಯನ್ನು ಸ್ಚಚ್ಛಗೊಳಿಸಿದ್ದ ವಿಡಿಯೋವೊಂದು ವೈರಲ್ ಆಗಿದೆ. ನದಿ ಶುಚಿಗೊಳಿಸಿದ ಯುವಕ ಎಂದೇ ಫೇಮಸ್ ಆಗಿದ್ದ ಬಿಟ್ಟು ತಬಾಹಿ ( ಸುರೇಂದ್ರ ಸಿಂಗ್ ಚೌಧರಿ) ಗೆ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಆಫರ್ ಸಿಕ್ಕಿದೆಯಂತೆ!
ಹೌದು, ಬಿಎಸ್ಸಿ ವಿದ್ಯಾರ್ಥಿಯಾದ ಬಿಟ್ಟು ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಬ್ಯಾವರಾ ಪಟ್ಟಣದಲ್ಲಿ ಹರಿಯುವ ನೀರು ಕಲುಷಿತವಾಗಿದ್ದು ಕಂಡು, ನದಿಯ ನೀರನ್ನು ಶುಚಿಗೊಳಿಸುತ್ತೇನೆ ಎಂದು ಪಣ ತೊಟ್ಟಿದ್ದ. ಈತ ಯಾವುದೇ ಯಂತ್ರವಿಲ್ಲದೆ ಕೈಯಿಂದ ಪ್ರತೀ ಕಸವನ್ನು ತೆಗೆದು ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಓಶನ್ ಕ್ಲೀನ್ಅಪ್ನ ಸಿಇಒ ಬೋಯನ್ ಸ್ಲಾಟ್ ಬನ್ನಿ ನಮ್ಮ ಜೊತೆ ಕೆಲಸ ಮಾಡಿ ಎಂದು ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಈ ವರ್ಷದ ಜನವರಿಯಲ್ಲಿ ಸ್ನೇಹಿತರ ಜೊತೆ ಸೇರಿ ಕ್ಲೀನಿಂಗ್ ಕೆಲಸ ಆರಂಭಿಸಿದ್ದ ಬಿಟ್ಟುಗೆ ಬರುಬರುತ್ತಾ ಸ್ನೇಹಿತರ ಸಾಥ್ ಸಿಗಲಿಲ್ಲ. ತದನಂತರ ಧೃತಿಗೆಡದೆ ಒಬ್ಬನೇ ೫೦೦ ಮೀಟರ್ನಷ್ಟು ಉದ್ದದ ನದಿಯ ಭಾಗವನ್ನು ಒಂಟಿಯಾಗಿಯೇ ಸ್ವಚ್ಛಗೊಳಿಸಿದ್ದ. ತನ್ನದೇ ಸ್ವಂತ ಖರ್ಚಿನಿಂದ ಈ ಕೆಲಸ ಮಾಡಿದ್ದ. ಗಂಟೆಗಟ್ಟಲೆ ಕಲುಷಿತ ನೀರಿನಲ್ಲಿ ನಿಂತು ಕಾಲಿಗೆ ಸೋಂಕು ತಗುಲಿದರೂ ಬಿಟ್ಟು ಹಠಬಿಡದೇ ಕ್ಲೀನಿಂಗ್ ಮುಗಿಸಿದ್ದಾನೆ. ಜನ ಹುಚ್ಚ, ಓದೋದು ಬಿಟ್ಟು ಚರಂಡಿ ಕ್ಲೀನ್ ಮಾಡ್ತಿದ್ದಾನೆ ಎಂದೆಲ್ಲಾ ಹೇಳಿದರೂ ತಲೆಕೆಡಿಸಿಕೊಂಡಿಲ್ಲ. ಈತನ ಸಾಧನೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆಯೇ ಗಣ್ಯಾತಿಗಣ್ಯರೇ ಈತನ ಸಪೋರ್ಟ್ಗೆ ನಿಂತಿದ್ದರು. ಇದೀಗ ಇನ್ನೂ ಬಿಎಸ್ಸಿ ಓದುತ್ತಿರುವ ವಿದ್ಯಾರ್ಥಿಗೆ ಸಂಬಳ ಪಡೆಯೋ ಆಪರ್ಚುನಿಟಿ ಸಿಕ್ಕಿದೆ!



