ಹೊಸದಿಗಂತ ವರದಿ ವಿಜಯಪುರ
ಹಣದ ಬೇಡಿಕೆ ಇಟ್ಟು, ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಪಿಎಸ್ಐ ಸೇರಿ ಕೆಲವರ ಹೆಸರು ಬರೆದಿಟ್ಟು, ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎಪಿಎಂಸಿ ಠಾಣೆ ಪಿಎಸ್’ಐ ಸೋಮೇಶ ಗೆಜ್ಜಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.
ತನ್ನ ಮೇಲೆ ವಿನಾಕಾರಣ ಸುಳ್ಳು ಆರೋಪ ಹೊರಸಿ, ಹಣದ ಬೇಡಿಕೆ ಇಟ್ಟು ದೌರ್ಜನ್ಯ ನಡೆಸಿದ್ದಾರೆ ಎಂದು ನಗರದ ಸೋಮನಾಥ ನಾಗಮೋತಿ ಎಂಬ ಯುವಕ ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಸೋಮೇಶ ಗೆಜ್ಜಿ, ಸಹೋದರ ಚೇತನ್ ಗೆಜ್ಜಿ, ರವಿ ದೇಗಿನಾಳ, ಸಂತೋಷ ದೇಗಿನಾಳ ಅವರ ಮೇಲೆ ಆರೋಪಿಸಿ ಡೆತ್ನೋಟ್ ಬರೆದಿಟ್ಟು, ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದ. ಆತನ ಶವ ಮೊನ್ನೆ ಕೊಲ್ಹಾರದ ಕೃಷ್ಣಾ ನದಿ ಪಾತ್ರದಲ್ಲಿ ಪತ್ತೆಯಾಗಿತ್ತು.
ಪಿಎಸ್ಐ ಸೋಮೇಶ ಗೆಜ್ಜಿ ಸೇರಿ ಇತರರು ನಡೆಸಿದ ದೌರ್ಜನ್ಯದ ಕುರಿತು ಯುವಕ ಸೋಮನಾಥ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಠಾಣೆ ಪಿಎಸ್ಐ ಸೋಮೇಶ ಗೆಜ್ಜಿಯನ್ನು ಅಮಾನತು ಮಾಡಲಾಗಿದ್ದು, ಪ್ರಕರಣ ಕುರಿತು ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಮಾಹಿತಿ ನೀಡಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ