ಕೋರ್ಟ್ ಆವರಣದಲ್ಲೇ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಹಾಜರಾಗಿದ್ದಂತ ಯುವತಿಯೊಬ್ಬಳು, ನ್ಯಾಯಾಲಯದ ಆವರಣದಲ್ಲೇ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಇಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ನಡೆದಿದೆ.

ಕಾರ್ಪೊರೇಷನ್‌ ಸರ್ಕಲ್‌ ಬಳಿಯಿರುವ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ (Bengaluru Magistrate Court) ಹಾಜರಾದ ಕಾಂಚನ ಎಂಬ ಯುವತಿ ವಕೀಲ ಕೃಷ್ಣಾರೆಡ್ಡಿ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾಳೆ. ಘಟನೆ ನಂತರ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕೃಷ್ಣಾರೆಡ್ಡಿ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹರೀಶ್ ಎಂಬ ವ್ಯಕ್ತಿಯಿಂದ 5 ಲಕ್ಷ ಹಣ ಪಡೆದಿದ್ದ ಕಾಂಚನಾ ವಾಪಸ್ ನೀಡಿರಲಿಲ್ಲ. ಕಳೆದ 3 ವರ್ಷಗಳಿಂದ ಹಣ ವಾಪಸ್ ನೀಡುವುದಾಗಿ ಹೇಳುತ್ತಿದ್ದ ಕಾಂಚನಾ ಚೆಕ್ ಕೂಡ ನೀಡಿದ್ದಳು. ಆದರೆ ಈ ಚೆಕ್​ ಬೌನ್ಸ್ ಆಗಿರುವ ಹಿನ್ನೆಲೆ ದೂರು ಕೂಡ ದಾಖಲಾಗಿತ್ತು. ಈ ಸಂಬಂಧ ಇಂದು ಕೋರ್ಟ್​ಗೆ ಕಾಂಚನಾ ಹಾಜರಾಗಿದ್ದಾಳೆ. ಇತ್ತ ಹರೀಶ್ ಪರ ವಕೀಲರಾಗಿರುವ ಕೃಷ್ಣರೆಡ್ಡಿ ಪ್ರಕರಣವನ್ನು ಮುಂದುವರಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣವನ್ನು ಮುಂದುವರಿಸುವುದಾಗಿ ಹೇಳಿದ ಹಿನ್ನೆಲೆ ಕಾಂಚನಾ ಕೋಪಗೊಂಡು ಕೋರ್ಟ್​ ಒಳಗಿಂದ ಹೊರಬಂದಿದ್ದಾಳೆ. ಇತ್ತ ಕಲಾಪ ಮುಗಿಸಿದ ಬಳಿಕ ನ್ಯಾಯಾಲಯದ ಆವರಣಕ್ಕೆ ಬಂದ ಕೃಷ್ಣಾರೆಡ್ಡಿಯನ್ನು ತಡೆದ ಕಾಂಚನಾ, ಮತ್ತೆ ಕೇಸ್‌ ಮುಂದುವರಿಸುತ್ತಿಯಾ ಎಂದು ಹೇಳಿ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!