ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ಜೋರಾಗಿದೆ. ಈ ನಡುವೆ ಎಎಪಿ ಸಂಸದ ಸಂಜಯ್ ಸಿಂಗ್ನನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಸದನದ ಬಾವಿಗಿಳಿದು ಘೋಷಣೆ ಕೂಗಿ, ಮನಬಂದಂತೆ ವರ್ತಿಸಿದರು. ಸಭಾಪತಿ ಜಗದೀಪ್ ಧನಕರ್ ಎಚ್ಚರಿಕೆ ನೀಡಿದರೂ ಹಿಂದೆ ಸರಿಯದ ಕಾರಣ ಶಿಕ್ಷೆಗೊಳಗಾದರು.
ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಮಣಿಪುರದ ವಿಷಯ ಪ್ರಸ್ತಾಪಿಸಿದರು. ಮಣಿಪುರದ ವಿಚಾರವಾಗಿ ಪ್ರಧಾನಿ ಮೋದಿ ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಈ ನಡುವೆ ಸಭಾಪತಿ ಜಗದೀಪ್ ಧನಕರ್ ಪ್ರಶ್ನೋತ್ತರ ಅವಧಿಯನ್ನು ಮುಂದುವರಿಸುವಂತೆ ಸೂಚಿಸಿದರು. ಜಲಸಂಪನ್ಮೂಲ ಸಚಿವ ಗಜೇಂದ್ರ ಶೇಕಾವತ್ ಅವರು ತಮ್ಮ ಸಚಿವಾಲಯದ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಎಎಪಿ ಸಂಸದ ಸಂಜಯ್ ಸಿಂಗ್ ಸದನದ ಬಾವಿಗೆ ಹಾರಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಪ್ರಶ್ನೋತ್ತರ ಅವಧಿಯನ್ನು ಮುಂದುವರಿಸಲು ಅವಕಾಶ ನೀಡುವುದನ್ನು ವಿರೋಧಿಸಿ ಸಂಜಯ್ ಸಿಂಗ್ ಪ್ರತಿಭಟಿಸಿದರು. ಅಧ್ಯಕ್ಷರು ವಾಪಸ್ ಹೋಗುವಂತೆ ತಾಕೀತು ಮಾಡಿದರೂ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಆಪ್ ಸಂಸದನ ವರ್ತನೆಯಿಂದ ಕೋಪಗೊಂಡ ಸಭಾಪತಿ ಸಂಸದ ಸಂಜಯ್ ಸಿಂಗ್ ಅಮಾನತುಗೊಳಿಸುವುದಾಗಿ ಘೋಷಿಸಿದರು.