ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸಂಚಲನ ಮೂಡಿಸಿದ್ದ ವಾರಾಣಸಿ ಜ್ಞಾನವಾಪಿ ಪ್ರಕರಣಗಳಲ್ಲಿ ಮುಸ್ಲಿಮ್ ಬಣದ ವಕೀಲರಾಗಿರುವ ಅಭಯ್ನಾಥ್ ಯಾದವ್ ನಿಧನರಾಗಿದ್ದಾರೆ.
62 ವರ್ಷದ ಅಭಯ್ನಾಥ್ ಅವರಿಗೆ ಭಾನುವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.
ಅಸ್ವಸ್ಥರಾದ ತಕ್ಷಣವೇ ಕುಟುಂಬಸ್ಥರು ಅವರನ್ನು ಮಕ್ಬೂಲ್ ಆಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗಾಗಲೇ ಅವರು ಸಾವನ್ನಪ್ಪಿದ್ದರು. ವಾರಣಾಸಿಯ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಮುಸ್ಲಿಂ ಪರ ಎಲ್ಲಾ ಪ್ರಕರಣಗಳಲ್ಲಿ ಮುಖ್ಯ ವಕೀಲರಾಗಿದ್ದರು.
ನ್ಯಾಯಾಲಯದಲ್ಲಿ ಮುಸ್ಲಿಂ ಪರವಾಗಿ ಏಕಾಂಗಿಯಾಗಿ ವಾದ ಮಂಡಿಸುತ್ತಿದ್ದ ಅವರು, ವೈಯಕ್ತಿಕ ಜೀವನದಲ್ಲಿ ಸ್ನೇಹಪರ ವ್ಯಕ್ತಿ. ಅವರ ವಾದಗಳಿಂದ ವಕೀಲರ ಸಮಾಜದಲ್ಲಿಯೂ ಹೆಚ್ಚು ಗೌರವ ಹೊಂದಿದ್ದರು.