ಹೊಸದಿಗಂತ ವರದಿ ಮಂಡ್ಯ :
ರಾಜ್ಯದಲ್ಲಿ ಸಮಾಜ ವಿರೋಧಿ ಚಟುವಟಿಕೆಯಲ್ಲಿ ನಿರತವಾಗಿರುವ ಪಾಪುಲರ್ ಫ್ರೆಂಟ್ ಆಫ್ ಇಂಡಿಯಾ ಹಾಗೂ ಎಸ್ಡಿಪಿಐ ಸಂಘಟನೆಗಳನ್ನು ನಿಷೇದಿಸುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.ಎಲ್ಲ ಮಂಡಲಗಳಿಂದ ಆಗಮಿಸಿದ ಕಾರ್ಯಕರ್ತರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಸಮಾಜದ್ರೋಹಿ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಜನಾಂಗೀಯ ದ್ವೇಷ ಹರಡುವುದರಲ್ಲಿ ಈ ಸಂಘಟನೆಗಳು ನಿರತವಾಗಿವೆ. ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ಉಂಟು ಮಾಡುವ ಪೋಸ್ಟ್ಗಳನ್ನು ಬೇರೆ ಬೇರೆ ಹೆಸರಿನ ಪೇಜ್ಗಳ ಮೂಲಕ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಮತ್ತು ಬಹಿರಂಗವಾಗಿ ಕೋಮು ದ್ವೇಷ ಹರಡುವುದು ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ಬಹಿರಂಗವಾಗಿ ಹಿಂದುಪರ ಸಂಘಟನೆಗಳನ್ನು ನಾಶಪಡಿಸುವುದಾಗಿ ಹೇಳಿಕೆ ನೀಡುವುದು ಕೋಮು ಪ್ರಚೋದನೆ ನೀಡುವುದರಲ್ಲಿ ನಿರತವಾಗಿವೆ. ಅಕ್ರಮ ಗೋಸಾಗಾಣೆಗೆ ಕುಮ್ಮಕ್ಕು ನೀಡುವುದು, ಆರ್.ಎಸ್.ಎಸ್. ಬಗ್ಗೆ ಬಹಿರಂಗ ಅವಹೇಳನಕಾರಿಯಾಗಿ ಟೀಕಿಸುವುದು ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಈ ಸಂಘಟನೆಗಳು ಸಕ್ರಯವಾಗಿವೆ ಎಂದು ದೂರಿದರು.
ತಕ್ಷಣ ದೇಶದ ಹಿತದೃಷ್ಠಿಯಿಂದ ಇಂತಹ ಪಾತಕ ಸಂಘಟನೆಗಳನ್ನು ನಿಷೇದಿಸಬೇಕು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿಸಿ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮುಂಬರುವ ದಿನಗಳಲ್ಲಿ ದೇಶ ವಿರೋಧಿ ಸಂಘಟನೆಗಳನ್ನು ಕಿತ್ತುಹಾಕುವ ಕೆಲಸ ಮಾಡಬೇಕು. ಬಂಧಿತರಿಗೆ ವಿದೇಶಿ ಹಣದ ನೆರವು ಬಗ್ಗೆ ಕೂಲಂಕುಷ ತನಿಖೆ ನಡೆಸಿ ಆರೋಪಿಗಳನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಥವಾ ಭಯೋತ್ಪಾದಕ ನಿಗ್ರಹ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಇವರಿಗೆ ಹಣಕಾಸು ನೆರವು ನೀಡುತ್ತಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳ ಸ್ಥಿರ ಮತ್ತು ಚರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.