ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಸ್ ಮಹಾರಾಜ್ ರವಿತೇಜ, ನಿರ್ದೇಶಕ ವಂಶಿ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ ಆಕ್ಷನ್ ಚಿತ್ರ ‘ಟೈಗರ್ ನಾಗೇಶ್ವರರಾವ್’. ಈ ಸಿನಿಮಾ ಚಿತ್ರೀಕರಣದ ವೇಳೆ ನಟನಿಗೆ ಗಂಭೀರ ಗಾಯವಾಗಿದ್ದು, 12ಹೊಲಿಗೆ ಬಿದ್ದಿವೆ.
ರವಿತೇಜ ಸಿನಿಮಾದಲ್ಲಿ ರೈಲು ದರೋಡೆ ಸೀನ್ ಮಾಡುವಾಗ ರೈಲಿನಿಂದ ಜಿಗಿಯುವ ಶಾಟ್ ಇದ್ದು, ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ಮೊಣಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. 12ಹೊಲಿಗೆ ಹಾಕಿಸಿಕೊಂಡು ಆಸ್ಪತ್ರೆ ಬೆಡ್ ಮೇಲಿದ್ದರೂ ಸಿನಿಮಾ ಮೇಲೆ ಅವರಿಗಿದ್ದ ಪ್ರೀತಿ, ಕಾಳಜಿ ಮತ್ತೆ ವಾಪಸ್ ಬರುವಂತೆ ಮಾಡಿದೆ.
ಆ ಶಾಟ್ನಲ್ಲಿ ಸುಮಾರು 400 ಕಿರಿಯ ಕಲಾವಿದರಿದ್ದಾರೆ. ಹೆಚ್ಚು ದಿನ ಚಿತ್ರೀಕರಣ ಮುಂದೂಡಿದರೆ ನಿರ್ಮಾಪಕರಿಗೆ ನಷ್ಟ ಆಗುತ್ತದೆ ಎಂಬ ಕಾರಣಕ್ಕೆ ಎರಡು ದಿನದಲ್ಲಿ ಮತ್ತೆ ಚಿತ್ರೀಕರಣಕ್ಕೆ ಬಂದರು. ಸಂಪೂರ್ಣವಾಗಿ ಗಾಯ ವಾಸಿಯಾಗುವವರೆಗೂ ರೆಸ್ಟ್ ತೆಗೆದುಕೊಳ್ಳುವಂತೆ ನಿರ್ದೇಶಕರು ಹೇಳಿದರೂ ಬಜೆಟ್ ಜಾಸ್ತಿಯಾಗುತ್ತದೆ ಎಂದು ಶೂಟಿಂಗ್ ಗೆ ಬಂದ ವಿಚಾರವನ್ನು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಸಂದರ್ಶನವೊಂದರಲ್ಲಿ ಹೇಳಿದರು.
ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟಿಯರಾದ ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ರೇಣು ದೇಸಾಯಿ, ಅನುಪಮ್ ಖೇರ್ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ದಸರಾ ಉಡುಗೊರೆಯಾಗಿ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ.