ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿನ ಕುಮಾರಕೃಪಾದಲ್ಲಿರುವ ಅವರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ದೇವಾಲಯಗಳ ಅರ್ಚಕರ ಒಕ್ಕೂಟದ ನಿಯೋಗವು ಭೇಟಿ ಮಾಡಿದೆ.
ಈ ವೇಳೆ ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಾಲಯಗಳ ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.
ನಿಯೋಗವು ಐದು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವುಗಳನ್ನು ಸಿಎಂ ಸಿದ್ಧರಾಮಯ್ಯ ಈಡೇರಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಅರ್ಚಕರಿಗೆ ನಿವೃತ್ತಿ ವಯಸ್ಸನ್ನು 60 ಕ್ಕೆ ನಿಗದಿಪಡಿಸಿರುವ ನಿಯಮವನ್ನು ತೆಗೆದುಹಾಕಬೇಕು. ತಮ್ಮ ವೇತನವನ್ನು ಪ್ರಸ್ತುತ ವರ್ಷಕ್ಕೆ 60 ಸಾವಿರ ರೂ.ಗಳಿಂದ 72 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
ಸದ್ಯ ಮುಜರಾಯಿ ಇಲಾಖೆ ಅಡಿ ಬರುವ 35 ಸಾವಿರ ಕ್ಕೂ ಹೆಚ್ಚು ದೇವಾಲಯದ ಅರ್ಚಕರಿಗೆ ಸರ್ಕಾರ ಸಂಭಾವನೆ ನೀಡುತ್ತಿದೆ.
ಅದೇ ರೀತಿ ಮುಜರಾಯಿ ದೇವಾಲಯಗಳಿಗೆ ಖಾಸಗಿ ಟ್ರಸ್ಟ್ ರಚಿಸುವ ಹಿಂದಿನ ಸರ್ಕಾರದ ನಿರ್ಧಾರ ಹಿಂಪಡೆಯಬೇಕು. ಧಾರ್ಮಿಕ ದತ್ತಿ ಇಲಾಖೆಯಲ್ಲೂ ನೌಕರರ ಕೊರತೆ ಇದ್ದು, ನೇಮಕ ಮಾಡುವಂತೆ ತಿಳಿಸಲಾಗಿದೆ. ಗ್ರಾಮೀಣ ಭಾಗದ ದೇವಾಲಯಗಳಿಗೆ ಪೂಜಾ ಸಾಮಗ್ರಿಗಳ ಖರೀದಿ ಮತ್ತು ಸಂಭಾವನೆ ಮಿತಿ ಹೆಚ್ಚಳಕ್ಕೆ ಒತ್ತಾಯಿಸಲಾಗಿದ್ದು, ಈಗ ಮಾಸಿಕ 5 ಸಾವಿರ ರೂ. ಇದ್ದು, 10 ಸಾವಿರ ರೂ. ಏರಿಕೆಗೆ ಮನವಿ ಸಲ್ಲಿಸಲಾಗಿದೆ.