ಜಾನಪದ‌ ಕಲಾವಿದೆ ಪೆದ್ದ‌ ಮಾರೆಕ್ಕಗೆ ಅಕಾಡೆಮಿ ಪ್ರಶಸ್ತಿ

ಹೊಸದಿಗಂತ ವರದಿ,ಬಳ್ಳಾರಿ:

ಜಾನಪದ ಬುರ್ರಾಕಥೆ ಕಲಾ ಕ್ಷೇತ್ರದಲ್ಲಿ ಬಾಲ್ಯದಿಂದ ಹಿಡಿದು ವೃದ್ಯಾಪ್ಯವರೆಗೂ ಸಲ್ಲಿಸಿದ ಪೆದ್ದ ಮಾರೆಕ್ಕ ಅವರು, 2021ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲೆಯ ಕಂಪ್ಲಿ ತಾಲೂಕಿನ ಸೋಲಾಪುರದ ಅಲೆಮಾರಿ ಬುಡ್ಗಜಂಗಮ ಸಮುದಾಯದ ಪೆದ್ದ‌ ಮಾರೆಕ್ಕ ಅವರು, ಜಾನಪದ ಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಅಕಾಡೆಮಿ ಅವರು ಗುರುತಿಸಿ ಪ್ರಶಸ್ತಿ ಘೋಷಿಸಿದೆ.
ಮಾರೆಕ್ಕ ಅವರಿಗೆ ಬುರ್ರಕಥಾ ಕಲೆ ತಂದೆ ಹಾಗೂ ತಾಯಿ ಅವರಿಂದ ‌ಬಂದ‌ ಬಳುವಳಿಯಾಗಿದೆ. ಬಾಲ್ಯದಲ್ಲಿ ಆಲಿಸಿ ಕಲಿತು ಹಾಡಲು ಆರಂಭಿಸಿದರು. ಮಾರೆಕ್ಕ ಅವರ ಪತಿ ದಿ.ದೊಡ್ಡ ಮಾರೆಪ್ಪ ಹಾಗೂ ಸಂಗಡಿಗರಾದ ಸಹೋದರ ಮಾರೆಪ್ಪ ಬಲಗೊಲ್ಲ, ಸಹೋದರಿ ಸಣ್ಣ‌ಮಾರೆಕ್ಕ, ಅಶ್ವ, ಚಿಕ್ಕಪ್ಪನ ಮಗಳಾದ ಲಿಂಗಮ್ಮ ರೇವಲ್ಲಿ, ಮಗ‌ ಮಾರೇಶ್ ಸೇರಿದಂತೆ ಇತರರ ಸಹಕಾರದೊಂದಿಗೆ ಊರೂರು ಅಲೆಯುತ್ತಾ ರಾಜ ಮಹಾರಾಜರ ಮತ್ತು ಮಹಿಳೆಯ ಸಂವೇದನೆಗಳನ್ನು,‌ನೀತಿ ಮೌಲ್ಯಗಳನ್ನು ತನ್ನ ಬುರ್ರಕಥಾ ಕಲಾ ಪ್ರಕಾರದೊಂದಿಗೆ ಮಹಾ ಕಾವ್ಯಗಳನ್ನು ತಂಬೂರಿ, ಬುಡ್ಗ ವಾದ್ಯದ ಮೂಲಕ ಹಾಡುತ್ತಾ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಗಮನಸೆಳೆದಿದ್ದಾರೆ. ಹಂಪಿ ಉತ್ಸವ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ಹಾಡಿ ನೋಡುಗರ ಗಮನಸೆಳೆದಿದ್ದಾರೆ. ಜಾನಪದ ಕಲೆ ‌ಜೊತೆಗೆ 2015ರಲ್ಲಿ ದೇವಲಾಪುರ ಗ್ರಾ.ಪಂ.ಸದಸ್ಯೆಯಾಗಿ ಸೇವೆ ಸಲ್ಲಿಸಿ ಗಮನಸೆಳೆದಿದ್ದಾರೆ.

ಬಾವುಕರಾದ ಮಾರೆಕ್ಕ: ಸುದ್ದಿಗಾರರೊಂದಿಗೆ ‌ಮಾತನಾಡಿದ‌ ಅವರು, ನಾಡೋಜ ದಿ.ದರೋಜಿ ಈರಮ್ಮ ಅವರಿಂದ ತೆಲಗು‌ ಭಾಷೆಯ ಬುರ್ರಕಥಾ ಹೇಳುವದನ್ನು ಕಲಿತೆ. ಅವರೇ ನನಗೆ ಸ್ಪೂರ್ತಿಯಾಗಿದ್ದರು ಎಂದು ಬಾವುಕರಾದರು.
ಅಭಿನಂದನೆ: ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತೆ ಪೆದ್ದ‌ಮಾರೆಕ್ಕ ಅವರು ಪ್ರಶಸ್ತಿಗೆ ‌ಭಾಜನರಾದ ಹಿನ್ನೆಲೆ, ಕಲಬುರ್ಗಿ ವಿಶ್ವ ವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಕರ್ನಾಟಕ ಜಾನಪದ ಅಕಾಡೆಮೆ ಪ್ರಶಸ್ತಿ ಪುರಸ್ಕೃತರಾದ ಅಶ್ವ ರಾಮಣ್ಣ‌ ಸೇರಿ ಇತರರು ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!