ಹೊಸದಿಗಂತ ವರದಿ, ಚಿತ್ರದುರ್ಗ:
ಕೃಷಿ ಹೊಂಡ ನಿರ್ಮಾಣಕ್ಕೆ ಸಂಬಂಧಿಸಿದ ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ ಎಂಬುವರು ರೈತ ಫಲಾನುಭವಿಯಿಂದ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಭರಮಸಾಗರ ಬಳಿಯ ಅರಬಗಟ್ಟದ ಕೃಷ್ಣನಾಯ್ಕ್ ಎಂಬುವರು ತಮ್ಮ ಜಮೀನಿನಲ್ಲಿನ ಕೃಷಿ ಹೊಂಡ ನಿರ್ಮಾಣಕ್ಕೆ ಸಂಬಂಧಿಸಿದ ಹಣ ಪಡೆಯಲು ಬಿಲ್ ಮಾಡಿಕೊಡುವಂತೆ ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ ಮನವಿ ಮಾಡಿದ್ದರು. ಬಿಲ್ ಮಾಡಿಕೊಡಲು 1.40 ಲಕ್ಷ ರೂ. ನೀಡುವಂತೆ ಕೃಷ್ಣನಾಯ್ಕ್ ಅವರಿಗೆ ಅಧಿಕಾರಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ತೋಟಗಾರಿಕೆ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟ ಕುರಿತು ಕೃಷ್ಣನಾಯ್ಕ್, ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿ ತೋಟಯ್ಯ ರೈತ ಫಲಾನುಭವಿ ಕೃಷ್ಣನಾಯ್ಕ್ ಅವರಿಂದ 30 ಸಾವಿರ ರೂ. ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಅಧಿಕಾರಿ ತೋಟಯ್ಯ ಬಿದ್ದಿದ್ದಾರೆ.