ಹೊಸದಿಗಂತ ವರದಿ,ಬಳ್ಳಾರಿ:
ಆಕಸ್ಕಿಕ ಬೆಂಕಿ ತಗುಲಿ ಬಣವಿಯೊಂದು ಸುಟ್ಟು ಕರಕಲಾಗಿದ್ದು, ಎರಡು ಎತ್ತುಗಳಿಗೆ ಗಂಭೀರ ಗಾಯಗಳಾದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ 64-ಹಳೇಕೋಟೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಗ್ರಾಮದ ಭೋವಿ ಅಂಜಿನಪ್ಪ ಅವರಿಗೆ ಸೇರಿದ ಬಣವೆ ಮತ್ತು 2 ಎತ್ತುಗಳು ಎಂದು ಗುರುತಿಸಲಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಭಾಜಪ ಯುವ ಘಟಕದ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದ ರೈತ ಅಂಜಿನೆಪ್ಪ ಅವರಿಗೆ ಸಿದ್ದಪ್ಪ ಅವರು ಧೈರ್ಯ ತುಂಬುವ ಕೆಲಸ ಮಾಡಿದರು. ಕೂಡಲೇ ತಂದೆ, ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ ಅವರೊಂದಿಗೆ ಚೆರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡುವೆ ಎಂದು ಭರವಸೆ ನೀಡಿದರು. ಪಶುಸಂಗೋಪನೆ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಗಾಯಗೊಂಡಿರುವ ಎತ್ತುಗಳಿಗೆ ಕೂಡಲೇ ಚಿಕಿತ್ಸೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಬರುವ ದಿನಗಳಲ್ಲಿ ಇಲಾಖೆಯಿಂದ ಎತ್ತುಗಳ ಖರೀದಿಗೆ ಸಾಲ ಮಂಜೂರು ಮಾಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಶಂಕರಪ್ಪ, ವೆಂಕಟೇಶ, ವೀರೇಶ್ ಇತರರಿದ್ದರು.