ಹೊಸದಿಗಂತ ವರದಿ, ಮಡಿಕೇರಿ:
ಕೋವಿಯಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಒಬ್ಬರು ಗಾಯಗೊಂಡ ಘಟನೆ ಶನಿವಾರಸಂತೆ ಸಮೀಪದ ಗೌಡಳ್ಳಿಯ ಚಿಕ್ಕಾರೆ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡವರನ್ನು ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮದ ಕೆ.ಪೂಣಚ್ಚ ಎಂದು ಗುರುತಿಸಲಾಗಿದೆ.
ಪೊನ್ನಂಪೇಟೆ ಸಮೀಪದ ಸುಳುಗೋಡು ಗ್ರಾಮದ ಕಾಂಡೇರ ಡಿಂಪು ಕಾರ್ಯಪ್ಪ ಮತ್ತು ಅವರ ಸ್ನೇಹಿತರಾದ ಕಿರುಗೂರು ಗ್ರಾಮದ ಕೆ. ಪೂಣಚ್ಚ, ಮತ್ತೂರು ಗ್ರಾಮದ ಚೀರಂಡ ಅಪ್ಪಣ್ಣ ಬೋಪಯ್ಯ, ಬೆಸಗೂರು ಗ್ರಾಮದ ಬಾಚಮಂಡ ಸೋಮೇಶ್ ಅವರುಗಳು ಸೋಮವಾರಪೇಟೆಯಲ್ಲಿ ಬಂದೂಕು ರಿಪೇರಿ ಮಾಡಿಸಿಕೊಂಡು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರೆ ಗ್ರಾಮದ ಕೃಷಿಕ ಶಿವಕುಮಾರ್ ಎಂಬವರ ಮನೆಗೆ ಬಂದಿದ್ದರು.
ತೋಟದಲ್ಲಿ ಕಾಫಿ, ಕಾಳು ಮೆಣಸಿನ ಬೆಳೆ ನೋಡಲೆಂದು ತೆರಳಿದ್ದಾಗ ಅಪ್ಪಣ್ಣ ಬೋಪಯ್ಯ ಅವರ ಕೈಯಲ್ಲಿದ್ದ ಬಂದೂಕಿನ ಟಿಗರ್ಗೆ ಆಕಸ್ಮಿಕವಾಗಿ ಬೆರಳು ತಾಗಿ ಸಿಡಿದ ಗುಂಡು ರಸ್ತೆ ಬದಿಯ ಬಂಡೆಕಲ್ಲಿಗೆ ಬಿದ್ದು, ಪಕ್ಕದಲ್ಲಿ ಹೋಗುತ್ತಿದ್ದ ಪೂಣಚ್ಚ ಅವರ ಮೂಗಿಗೆ ಬಡಿದಿದೆ.
ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷಿಕ ಶಿವಕುಮಾರ್ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ಹಾಜರಾಗಿ ಚೀರಂಡ ಅಪ್ಪಣ್ಣ ಬೋಪಯ್ಯ ಅವರ ವಿರುದ್ಧ ದೂರು ನೀಡಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಹೆಡ್ ಕಾನ್ಸ್ಟೇಬಲ್ ನಿಶಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಪ್ರಕರಣ ದಾಖಲಿಸಿದ್ದಾರೆ.