ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾದಲ್ಲಿ ಭಾರತೀಯ ಸೇನೆ ಪಡೆಯ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಬೆನ್ನಲ್ಲೇ ಈ ಕುರಿತು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ ದೆಹಲಿ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ದೇಶದ ಭದ್ರತಾ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು
ಸಶಸ್ತ್ರ ಸೀಮಾ ಬಲ್(ಎಸ್ಎಸ್ಬಿ)ನ ಹೆಡ್ ಕಾನ್ಸ್ಟೆಬಲ್ ದೀಪಕ್ ಕುಮಾರ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠವು, ಸಿನಿಮಾ ಕಾಲ್ಪನಿಕ ಕಥೆ ಆಧಾರಿತವಾಗಿರಬಹುದು. ಆದರೆ ದೇಶದ ಭದ್ರತಾ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ಹೀಗಾಗಿ ಈ ಕುರಿತು ನಡೆಸುವಂತೆ ಸೂಚಿಸಿದೆ.
ರಹಸ್ಯ ಕಾಯ್ದೆ ಉಲ್ಲಂಘನೆ ಆರೋಪ
ಅರ್ಜಿದಾರ ಕೋರ್ಟ್ ನಲ್ಲಿ, ಸಿನಿಮಾದಲ್ಲಿ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ವಿವರಗಳು ಬಹಿರಂಗವಾಗಿದೆ. ಈ ಮೂಲಕ ಸಿನಿಮಾ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಮಾಡಿದ್ದು, ಇದರಿಂದ ದೇಶದ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ವಾದಿಸಿದ್ದಾರೆ. ಭಾರತೀಯ ಸೇನೆಯ ಸೂಕ್ಷ್ಮ ಕಾರ್ಯಾಚರಣೆಯ ಸ್ಥಳಗಳು ಮತ್ತು ಮಿಲಿಟರಿ ತಂತ್ರಗಳನ್ನು ಸಿನಿಮಾದಲ್ಲಿ ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಪರಿಶೀಲನೆಗೆ ಕೋರ್ಟ್ ಸೂಚನೆ
ಈ ಸಂಬಂಧ ಕೋರ್ಟ್, ಸಿನಿಮಾವು ಕಾಲ್ಪನಿಕ ಮತ್ತು ಮನರಂಜನೆಗಾಗಿ ಮಾಡಲಾಗಿದ್ದರೂ ಕೂಡ ದೇಶದ ಭದ್ರತೆಯ ವಿಚಾರ ಬಂದಾಗ ನಾವು ಅವುಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಈ ಕುರಿತು ಸೂಕ್ಷ್ಮವಾಗಿ ಪರಿಶೀಲಿಸುವಂತೆ ನಿರ್ಧಾರ ತೆಗೆದುಕೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ(ಎಂಐಬಿ) ಮತ್ತು ಸಿಬಿಎಫ್ಸಿಗೆ ಸೂಚಿಸಿದೆ.



