ಹೊಸ ದಿಗಂತ ವರದಿ, ಹುಬ್ಬಳ್ಳಿ:
ರಾಜ್ಯದ ಎರಡನೇ ದೊಡ್ಡ ನಗರವಾದ ಹುಬ್ಬಳ್ಳಿಯಲ್ಲಿ ಮಿನಿ ವಿಧಾನ ಸೌಧಕ್ಕೆ ಸುಸಜ್ಜಿತ ಕಟ್ಟಡವಿಲ್ಲದಿರುವುದು ಬೇಸರದ ಸಂಗತಿ. ಆದ್ದರಿಂದ ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಿಸಿದ ಸಚಿವ ಗಮನಕ್ಕೆ ತಂದು ಹೈಟೆಕ್ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಶನಿವಾರ ಇಲ್ಲಿನ ಮಿನಿ ವಿಧಾನಸೌಧದ ತಾಲೂಕು ಕಚೇರಿಯಲ್ಲಿ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಗರದ ಮಿನಿ ವಿಧಾನ ಸೌಧ ಕಟ್ಟಡ ಹಾಗೂ ಕಾರ್ಯನಿರ್ವಾಹಣೆ ಬಗ್ಗೆ ನನಗೆ ಅಸಮಾಧಾನವಿದೆ. ಆದ್ದರಿಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೆ ಮಿನಿ ವಿಧಾನ ಸೌಧಕ್ಕೆ ಕಟ್ಟಡ ನಿರ್ಮಿಸಿಕೊಡಲು ಮನವಿ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜನಪರವಾದ ಕಾರ್ಯ ಮಾಡಿದೆ. ಸರ್ಕಾರವೇ ಜನರ ಮನೆಯ ಬಾಗಿಲಿಗೆ ಬರುವ ಕೆಲಸ ಮಾಡಲಾಗಿದೆ. ಅದೇ ರೀತಿ ತಹಶೀಲ್ದಾರ ಕಚೇರಿಯಲ್ಲಿ ಈ ಆಡಳಿತ ಆರಂಭಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಪಾರದರ್ಶಕ, ಸರಳ, ತ್ವರಿತ, ನೇರ ಹಾಗೂ ಸುರಕ್ಷತಾ ಆಡಳಿತ ನೀಡುವುದಾಗಿದೆ ಎಂದರು.