ಹೊಸದಿಗಂತ ವರದಿ, ದಾವಣಗೆರೆ:
ಶರಿಯಾ ಕಾನೂನಿನಡಿ ಅನೈತಿಕ ಸಂಬಂಧದ ಆರೋಪಿ ಮಹಿಳೆಯ ಮೇಲೆ ಮಸೀದಿ ಆವರಣದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ಸಮರ್ಥಿಸಿ ಮುಸ್ಲಿಂ ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರ ಕಾರು ತಡೆದು ಪ್ರತಿಭಟಿಸಿದ ಘಟನೆ ಸೋಮವಾರ ನಡೆಯಿತು.
ಜಿಲ್ಲೆಯ ಚನ್ನಗಿರಿ ತಾಲೂಕು ತಾವರೆಕೆರೆ ಗ್ರಾಮದಲ್ಲಿ ಮಹಿಳೆ ಮೇಲಿನ ಅಮಾನುಷ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಬಂದಿದ್ದ ಆಯೋಗದ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಹೇಳಿ ಚನ್ನಗಿರಿಯತ್ತ ಪ್ರಯಾಣ ಬೆಳೆಸಲು ಮುಂದಾದರು. ಈ ವೇಳೆ ಅವರ ಕಾರನ್ನು ತಡೆದ ಮುಸ್ಲಿಂ ಮಹಿಳೆಯರು ಕೆಲಕಾಲ ಪ್ರತಿಭಟನೆ ನಡೆಸಿ, ಹಲ್ಲೆಕೋರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪುರುಷರ ಕುಟುಂಬಸ್ಥರು ಸೇರಿದಂತೆ ಮುಸ್ಲಿಂ ಮಹಿಳೆಯರ ಗುಂಪು ಆಯೋಗದ ಸದಸ್ಯರ ಕಾರನ್ನು ಅಡ್ಡಹಾಕಿ ದಾಂಧಲೆ ಮಾಡಿದರು. ಮಹಿಳೆ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡ ಪ್ರತಿಭಟನಾನಿರತ ಮಹಿಳೆಯರು, ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರದ್ದೇ ತಪ್ಪಿದೆ. ಅವರ ಗಂಡಂದಿರು ಮಸೀದಿಗೆ ದೂರು ನೀಡಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ. ಆರೋಪಿ ಪುರುಷರು ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೂ ಅಮಾಯಕರನ್ನು ಬಂಧಿಸಿರುವುದರಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ವಾಗ್ದಾದ ನಡೆಸಿದರು.
ಮಹಿಳೆಯರಿಬ್ಬರ ಮೇಲೆ ಪುರುಷರು ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ವೀಡಿಯೊದಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಪ್ಪು ಯಾರದ್ದು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಆಯೋಗದ ಸದಸ್ಯೆ ಡಾ.ಅರ್ಚನಾ ಮುಜುಂದಾರ್ ಸಮಝಾಯಿಷಿ ನೀಡಿದರೂ ಮುಸ್ಲಿಂ ಮಹಿಳೆಯರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪ್ರತಿಭಟನಾಕಾರರನ್ನು ಚದುರಿಸಿ ಅಧಿಕಾರಿಗಳ ವಾಹನ ಹೋಗಲು ಅನುವು ಮಾಡಿಕೊಟ್ಟರು.
ಪರಪುರುನೊಂದಿಗೆ ಸಲುಗೆಯಿಂದ ವರ್ತಿಸಿದ ಹಾಗೂ ಇದಕ್ಕೆ ಸಹಕರಿಸಿದ ಇಬ್ಬರು ಮಹಿಳೆಯರ ಮೇಲೆ ಮುಸ್ಲಿಂ ಸಮುದಾಯದ ಗುಂಪೊಂದು ತಾವರೆಕೆರೆಯ ಜಾಮೀಯಾ ಮಸೀದಿ ಎದುರು ಕಳೆದ ಏ.9ರಂದು ಅಮಾನುಷವಾಗಿ ಹಲ್ಲೆ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದರಿಂದ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಇದರ ಪರಿಶೀಲನೆಗೆಂದು ಆಯೋಗದ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಗ್ರಾಮಕ್ಕೆ ಭೇಟಿ ನೀಡಿದ್ದರು.