ಹಿಂಡನ್‌ಬರ್ಗ್‌ ವರದಿಯಲ್ಲಿ ಅದಾನಿ ಟಾರ್ಗೆಟ್: ಕಾಂಗ್ರೆಸ್ ನಿಲುವಿಗೆ ಶರದ್‌ ಪವಾರ್‌ ವಿರೋಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉದ್ಯಮಿ ಗೌತಮ್‌ ಅದಾನಿ ಅವರ ಕುರಿತು ಅಮೆರಿಕದ ಹಿಂಡನ್‌ಬರ್ಗ್‌ ವರದಿ (Adani Hindenburg Row) ಇದೀಗ ಪ್ರತಿಪಕ್ಷಗಳ ನಡುವೆ ದೊಡ್ಡ ಬಂಡೆಯಂತಾಗಿದೆ.

ಇತ್ತ ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (JPC) ರಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸುತ್ತಿದೆ. ಅತ್ತ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿರುವ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ನಿಲುವಿನ ವಿರುದ್ಧ ಮಾತನಾಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿದೇಶದಲ್ಲೂ ಅದಾನಿ ಪ್ರಕರಣದ ಕುರಿತು ಮಾತನಾಡುತ್ತಿದ್ದಾರೆ. ಹಿಂಡನ್‌ಬರ್ಗ್‌ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಪಕ್ಷಗಳು ಕಾಂಗ್ರೆಸ್‌ ನಿಲುವನ್ನು ಒಪ್ಪಿಕೊಂಡಿವೆ.

ಆದ್ರೆ ಶರದ್‌ ಪವಾರ್‌ , ದೇಶದಲ್ಲಿ ನಾವು (ಪ್ರತಿಪಕ್ಷಗಳು) ವಿಷಯಗಳನ್ನು ಆಧಾರವನ್ನಾಗಿ ಇಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಡಬೇಕು. ಆದರೆ, ನಾವು ಇದುವರೆಗೆ ಹಿಂಡನ್‌ಬರ್ಗ್‌ ವರದಿ ಬಗ್ಗೆ ಕೇಳಿಯೇ ಇರಲಿಲ್ಲ. ಅವರು ಇದುವರೆಗೆ ಯಾವುದೇ ಹೇಳಿಕೆ ನೀಡಲ್ಲ. ಅವರು ನೀಡಿದ ವರದಿಯು ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಅಷ್ಟಕ್ಕೂ, ಆ ವರದಿಯನ್ನು ನಾವೇಕೆ ಗಂಭೀರವಾಗಿ ತೆಗೆದುಕೊಳ್ಳಬೇಕು? ಮೇಲ್ನೋಟಕ್ಕೆ ಒಬ್ಬ (ಅದಾನಿ) ವ್ಯಕ್ತಿಯನ್ನು ಗುರಿಯಾಗಿಸಿ ಸಿದ್ಧಪಡಿಸಿದ ವರದಿ ಇದಾಗಿದೆ ಎಂದು ಅನಿಸುತ್ತದೆ ಎಂದು ಹೇಳಿದರು.

ಒಂದು ಇಂಡಸ್ಟ್ರಿಯಲ್‌ ಗ್ರೂಪ್‌ಅನ್ನು ಗುರಿಯಾಗಿಸಿ ವರದಿ ತಯಾರಿಸಲಾಗಿದೆ. ಇಲ್ಲಿ ನಾವು ವರದಿಯ ಮೂಲಾಧಾರ ಏನು? ಯಾರಾದರೂ ತಪ್ಪು ಮಾಡಿದರೆ ತನಿಖೆಯಾಗಲಿ. ಆದರೆ, ಹಿಂಡನ್‌ಬರ್ಗ್‌ ವರದಿ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸುತ್ತಿದೆ. ಆದರೆ, ನನಗೆ ಈ ನಿಲುವು ಇಷ್ಟವಾಗುತ್ತಿಲ್ಲ. ಕೋಕಾ-ಕೋಲಾ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಲಾಗಿತ್ತು. ಆದರೆ, ಪ್ರಕರಣದ ಆರಂಭದಲ್ಲಿಯೇ ಎಂದಿಗೂ ಜೆಪಿಸಿ ರಚನೆಯಾಗಿಲ್ಲ ಎಂದ ಹೇಳಿದರು.

ನಾನು ಈ ರೀತಿ ಹೇಳಿದೆ ಎಂದರೆ , ಜಂಟಿ ಸಂಸದೀಯ ಸಮಿತಿ ರಚನೆಗೆ ಬೇಡಿಕೆ ಇಡಲೇಬಾರದು ಎಂದಲ್ಲ. ಬದಲಿಗೆ ಏಕೆ ಜೆಪಿಸಿ ತನಿಖೆಯ ಬೇಡಿಕೆ ಇದೆ? ಒಂದು ಔದ್ಯಮಿಕ ಸಂಸ್ಥೆಯ ವಿರುದ್ಧ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕೆ? ಆಡಳಿತ ಪಕ್ಷದ ವಿರುದ್ಧವೇ ಜೆಪಿಸಿ ರಚಿಸಿದರೆ ತನಿಖೆ ಯಾವ ಮಾರ್ಗ ಹಿಡಿಯುತ್ತದೆ ಎಂಬುದು ಗೊತ್ತಿದೆ. ಆದರೆ, ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ. ಕೋರ್ಟ್‌ ವಿಚಾರದಲ್ಲಿ ಯಾರೂ ಮೂಗು ತೂರಿಸಲು ಬರುವುದಿಲ್ಲ. ಹಾಗಾಗಿ, ಜಂಟಿ ಸಂಸದೀಯ ಸಮಿತಿ ರಚನೆಯ ಅಗತ್ಯವೇ ಇಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!