ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದಲ್ಲಿ ನಾಲ್ಕು ವಿದ್ಯುನ್ಮಾನ ಮತಯಂತ್ರಗಳು (EVM) ಬಿಜೆಪಿಗೆ (BJP) ಒಂದು ಹೆಚ್ಚುವರಿ ಮತವನ್ನು ದಾಖಲಿಸುತ್ತಿವೆ ಎಂಬ ವರದಿಯನ್ನು ಭಾರತ ಚುನಾವಣಾ ಆಯೋಗ (Election Commission of India) ಗುರುವಾರ ನಿರಾಕರಿಸಿದೆ.
ಈ ಸುದ್ದಿ ಸಂಪೂರ್ಣ ಸುಳ್ಳು (Fake News) ಎಂದು ಸುಪ್ರೀಂ ಕೋರ್ಟ್ನಲ್ಲಿ (Supreme Court) ಹಾಜರಿದ್ದ ಚುನಾವಣಾ ಆಯೋಗದ ಅಧಿಕಾರಿ ಹೇಳಿದ್ದಾರೆ.
ಹೆಚ್ಚುವರಿ ಮತ ಬಿದ್ದ ಸುದ್ದಿಗಳು ಸುಳ್ಳು. ನಾವು ಜಿಲ್ಲಾಧಿಕಾರಿಯವರ ಆರೋಪವನ್ನು ಪರಿಶೀಲಿಸಿದ್ದೇವೆ ಮತ್ತು ಅವು ಸುಳ್ಳು ಎಂದು ತೋರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ವಿವರವಾದ ವರದಿಯನ್ನು ಸಲ್ಲಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠಕ್ಕೆ ಹಿರಿಯ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರು ತಿಳಿಸಿದರು.
ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮೂಲಕ ಇವಿಎಂಗಳನ್ನು ಬಳಸಿ ಮಾಡಿದ ಮತಗಳನ್ನು ಸಂಪೂರ್ಣವಾಗಿ ಎಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಿದ ಮನವಿಗಳ ಬ್ಯಾಚ್ ವಿಚಾರಣೆಯ ಸಂದರ್ಭದಲ್ಲಿ ನಿತೇಶ್ ಕುಮಾರ್ ವ್ಯಾಸ್ ಅವರಿಂದ ಈ ಪ್ರತಿಕ್ರಿಯೆ ಬಂದಿದೆ.
ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಇಂದು ಆದೇಶಿಸಿತ್ತು.