ಏರೋ ಇಂಡಿಯಾ ಶೋ ರಕ್ಷಣಾ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏರೋ ಇಂಡಿಯಾ ಆಯೋಜನೆಯು ರಕ್ಷಣಾ ಕ್ಷೇತ್ರಕ್ಕೆ ಬಹುದೊಡ್ಡ ಉತ್ತೇಜನ ನೀಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗಲಿರುವ ಏರೋ ಇಂಡಿಯಾ 2023ರ (Aero India 2023) ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಏರೋ ಇಂಡಿಯಾ ಆಯೋಜನೆ ಆಗುತ್ತಿರುವುದು ಇಲ್ಲಿನ ಕೌಶಲ್ಯಯುತ ಯುವಕರಿಗೆ ಉದ್ಯೋಗ ಸೃಜನೆ ಮಾಡಲು ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

ಕಳೆದ‌ ಹಲವಾರು ತಿಂಗಳುಗಳ ಪರಿಶ್ರಮ ಈಗ‌ ಫಲ ನೀಡುತ್ತಿದೆ. ಡೈನಾಮಿಕ್ ಸಿಎಂ ಬಸವರಾಜ್​ ಬೊಮ್ಮಾಯಿಯವರಿಂದ (Basavaraj Bommai) ಇದು ಸಾಧ್ಯವಾಗಿದೆ. ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್​ನಲ್ಲಿ (IT Capital) ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು ಆಗಮಿಸುತ್ತಿದ್ದಾರೆ. ನಮ್ಮ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡೋಕೆ ಇದು ವೇದಿಕೆಯಾಗಿದೆ ಎಂದು ಹೇಳಿದ್ದಾರೆ.

ಏರೋ ಇಂಡಿಯಾ ಶೋ ಮೂಲಕ ಪ್ರಧಾನ ಮಂತ್ರಿಯವರು ನೀಡಿದ ಆತ್ಮನಿರ್ಭರ ಭಾರತದ ಪ್ರದರ್ಶನವಾಗುತ್ತದೆ. 2020ರಲ್ಲಿ ನಾವು ತುಂಬಾ ದೊಡ್ಡ ಈವೆಂಟ್ ಪ್ಲಾನ್ ಮಾಡಿದ್ದೆವು. ಈ‌ ಬಾರಿ ಅದಕ್ಕಿಂತ ದೊಡ್ಡ ಈವೆಂಟ್ ನಡೆಯಲಿದೆ. ಕರ್ನಾಟಕ, ದೇಶಕ್ಕೆ ಆರ್ಥಿಕ ಬಲ ನೀಡುವುದರಲ್ಲಿ ಮೇಲಿನ ಸ್ಥಾನದಲ್ಲಿದೆ. ರಾಜ್ಯ, ಸೇನೆಗೆ ಬೇಕಾದ ಅನೇಕ ಕಂಪನಿಗಳಿಗೆ ಜಾಗ ನೀಡಿದೆ. ರಾಜ್ಯ ಐಟಿ ಉತ್ಪಾದನಾ ಕ್ಯಾಪಿಟಲ್ ಆಗಿದೆ. 100ಕ್ಕೂ ಅಧಿಕ ಫ್ರೆಂಡ್ಲಿ ಕಂಟ್ರಿಗಳು ಈ ಶೋದಲ್ಲಿ ಭಾಗಿಯಾಗುತ್ತವೆ. ಕಳೆದ ಎಲ್ಲ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ. ವಿಂಗ್ಸ್ ಆಫ್​ದ ಫ್ರೂಚರ್ ಹೆಸರನಲ್ಲಿ ಇಂಡಿಯಾ‌ ಪೆವಿಲಿಯನ್ ಕಾಣಲಿದೆ ಎಂದು ಹೆಮ್ಮೆವ್ಯಕ್ತಪಡಿಸಿದರು.

ನಮ್ಮ ದೇಶದ ಬೆಳವಣಿಗೆಗೆ ಕೊಡುಗೆ ನೀಡುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿನ ಕೌಶಲ್ಯಯುತ ಮಾನವ ಸಂಪನ್ಮೂಲದ ಕಾರಣಕ್ಕೆ ಖಾಸಗಿ, ಸರ್ಕಾರಿ ಸಂಸ್ಥೆಗಳು ಇಲ್ಲಿ ನೆಲೆ ಕಂಡಿವೆ. ಇದೆಲ್ಲದರಿಂದಾಗಿ ಏರೋ ಸ್ಪೇಸ್‌ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರು, ಭವಿಷ್ಯದಲ್ಲಿ ವಿಶ್ವದ ಏರೋ ಸ್ಪೇಸ್‌ ಕೇಂದ್ರವಾಗಲಿದೆ ಎಂಬ ನಿರೀಕ್ಷೆಯಿದೆ. ಇದರಲ್ಲಿ ಕರ್ನಾಟಕ ಪೆವಿಲಿಯನ್‌ ಸಹ ಇರಲಿದೆ. ಹೊರಗಿನಿಂದ ಆಗಮಿಸುವ ಹೂಡಿಕೆಯಲ್ಲಿ ಹೆಚ್ಚಿನ ಅಂಶ ಕರ್ನಾಟಕದಲ್ಲಿ ಆಗುವ ಸಾಧ್ಯತೆಯಿದೆ. ಏರೋ ಇಂಡಿಯಾದಿಂದ ಕರ್ನಾಟಕದ ಯುವಕರಿಗೆ ಅತಿ ಹೆಚ್ಚು ಲಾಭ ಆಗುತ್ತದೆ ಎಂದರು.

ಇದೇ ಮಣ್ಣಿನ ಮಹಾನ್‌ ಪುತ್ರ ಸರ್‌ ಎಂ. ವಿಶ್ವೇಶ್ವರಯ್ಯ ಹೇಳಿದಂತೆ, ಉತ್ತಮ ದೇಶ ನಿರ್ಮಾಣಕ್ಕೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಬೇಕು. ಇದರತ್ತ ಏರೋ ಇಂಡಿಯಾ ಪರಿಣಾಮಕಾರಿ ಆಗಲಿದೆ ಎಂದರು.

ಇಲ್ಲಿ ಭಾಗವಹಿಸುವ ದೇಶಗಳೊಂದಿಗೆ ನಮ್ಮ ಮನಸ್ಸು ಮತ್ತು ವಿಚಾರಗಳ ಸಂಬಂಧವೂ ಇದೆ. ಇದೇ ಕಾರಣಕ್ಕೆ ಏರೋ ಇಂಡಿಯಾ ಎಲ್ಲ ದಾಖಲೆಗಳನ್ನೂ ಮೀರಿ ಮುಂದುವರಿಯುತ್ತಿದೆ. ರಕ್ಷಣಾ ಕೈಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡಿದಷ್ಟೂ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಇಲ್ಲಿ ಸಂಶೋಧನೆ ನಡೆಸುವ ಅನೇಕ ತಂತ್ರಜ್ಞಾನಗಳು ಸಾಮಾನ್ಯ ಜಗತ್ತಿನಲ್ಲೂ ಉಪಯೋಗಕ್ಕೆ ಬರುತ್ತವೆ. ನಾವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವುದರ ಜತೆಗೆ ದೇಶದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಈ ಕಾರ್ಯಕ್ರಮ ಸಹಕಾರಿ ಎಂದರು.

ಹೊಸ ವಿಚಾರಗಳಿಗೆ ಆದ್ಯತೆ ನೀಡಿದ ಬಸವಣ್ಣ, ಬೆಂಗಳೂರು ಸ್ಥಾಪಿಸಿದ ಕೆಂಪೇಗೌಡರನ್ನು ಭಾಷಣದ ಆರಂಭದಲ್ಲಿ ರಾಜನಾಥ್‌ ಸಿಂಗ್‌ ಸ್ಮರಿಸಿದರು.

ಭಾರತದ ಪೆವಿಲಿಯನ್‌ನಲ್ಲಿ, ಭಾರತದ ಭಾವಿಷ್ಯದ ಸಾಮರ್ಥ್ಯವನ್ನು ತೋರಿಸಲಿದೆ. ಈಗಾಗಲೆ ಸ್ಥಾಪಿತವಾದ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶೀಸಲಿವೆ. ರಕ್ಷಣಾ ಸಚಿವರ ಕಾನ್‌ಕ್ಲೇವ್‌ ಒಂದು ಬಹುಮುಖ್ಯ ಕಾರ್ಯಕ್ರಮ. ನಮ್ಮ ಮಿತ್ರ ದೇಶಗಳೊಂದಿಗೆ ರಕ್ಷಣಾ ಸಹಕಾರಕ್ಕೆ ಪೂರಕವಾಗಲಿದೆ. ಇದರ ಜತೆಗೆ ಸಿಇಒ ರೌಂಡ್‌ ಟೇಬಲ್‌ ಸಹ ನಡೆಯಲಿದೆ, ಇದೂ ಬಹುಮುಖ್ಯ ಭಾಗ. ಸ್ಟಾರ್ಟಪ್‌ ಮಂಥನ್‌ ಕಾರ್ಯಕ್ರಮದಲ್ಲಿ, ಯುವ ಉದ್ಯಮಿಗಳಿಗೆ ಪೂರಕ ವೇದಿಕೆ ಲಭಿಸಲಿದೆ.

ಇದಕ್ಕೂ ಮೊದಲು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 14ನೇ ಬಾರಿ ಏರೋ ಇಂಡಿಯಾ ಆಯೋಜನೆಗೆ ಕರ್ನಾಟಕಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಧನ್ಯವಾದ ಅರ್ಪಿಸಿದರು.

ಕಳೆದ್‌ ವರ್ಷ 23 ಸಾವಿರ ಚದರ ಮೀಟರ್‌ ವಿಸ್ತೀರ್ಣದಲ್ಲಿದ್ದ ಪ್ರದರ್ಶನ ವಿಸ್ತೀರ್ಣವು ಈ ಬಾರಿ 35 ಸಾವಿರ ಚದರ ಮೀಟರ್‌ ಆಗಿದೆ. ಹಾರಾಟ ಪ್ರದರ್ಶನ 67 ಇದೆ. 800 ಪ್ರದರ್ಶಕರು ಆಗಮಿಸುತ್ತಿದ್ದಾರೆ. ಕಳೆದ ಬಾರಿ 55 ದೇಶಗಳಿಂದ ಭಾಗಿಯಾಗಿದ್ದು, ಈ ಬಾರಿ 98 ದೇಶಗಳಿಂದ ಆಗಮಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!