ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆ ಸಂದರ್ಭದಲ್ಲಿ ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್ ಮಹಾರಾಜ್(Keshav Maharaj) ಅವರು ರಾಮಮಂದಿರಕ್ಕೆ(Keshav Maharaj at Ram Mandir) ಭೇಟಿ ನೀಡಿ ರಾಮಲಲಾನ ದರುಶನ ಪಡೆದಿದ್ದಾರೆ .
ಐಪಿಎಲ್(IPL 2024) ಭಾಗವಾಗಿ ಭಾರತಕ್ಕೆ ಬಂದಿರುವ ಕೇಶವ್ ಮಹರಾಜ್ ಭಾರತಕ್ಕೆ ಬಂದೊಡೆನೆ ನೇರವಾಗಿ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಫೋಟೊವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ಜೈ ಶ್ರೀ ರಾಮ್. ಎಲ್ಲರಿಗು ಒಳಿತು ಮಾಡಲಿ’ ಎಂದು ಬರೆದುಕೊಂಡಿದ್ದಾರೆ.
ಮಹರಾಜ್ ಅವರು ಮುಂಬರುವ ಟಿ20 ವಿಶ್ವಕಪ್ ಭಾಗವಾಗಿ ಐಪಿಎಲ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಶಿಬಿರಕ್ಕೆ ಸೇರಿದ್ದಾರೆ.
ಆಂಜನೇಯನ ಪರಮ ಭಕ್ತನಾಗಿರುವ ಕೇಶವ್ ಮಹಾರಾಜ್ ಶ್ರೀರಾಮ ಮಂದಿರ ಲೋಕಾರ್ಪಣೆಯ ವೇಳೆ ಮಂದಿರಕ್ಕೆ ಭೇಟಿ ನೀಡುವುದು ನನ್ನ ಈ ವರ್ಷದ ಪ್ರಮುಖ ಗುರಿ ಎಂದಿದ್ದರು. ಕೇಶವ ಮಹಾರಾಜ್ ಅವರು ಬ್ಯಾಟಿಂಗ್ ನಡೆಸಲು ಮೈದಾನಕ್ಕೆ ಬಂದಾಗಲೆಲ್ಲ ‘ರಾಮ್ ಸಿಯಾ ರಾಮ್’ ಹಾಡನ್ನು ಸ್ಟೇಡಿಯಂನಲ್ಲಿ ಜೋರಾಗಿ ಹಾಕಲಾಗುತ್ತದೆ. ಈ ಹಾಡನ್ನು ಕೇಳಿದರೆ ತನಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಅವರು ಹೇಳಿದ್ದರು.
ಕೇಶವ್ ಮಹಾರಾಜ್ ಮೂಲತಃ ಭಾರತೀಯರಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಅವರು ಭಾರತಕ್ಕೆ ಬಂದಾಗಲೆಲ್ಲಾ ಕುಟುಂಬ ಸಮೇತರಾಗಿ ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಮಹರಾಜ್ ಕೇರಳದ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.