ಹೊಸದಿಗಂತ ವರದಿ ಮಡಿಕೇರಿ:
ಇಲ್ಲಿನ ಸಮೀಪದ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಅಲ್ಲಿ ಹಂದಿ ಸಾಕಾಣಿಕಾ ಕೇಂದ್ರವೊಂದರಲ್ಲಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ.
ಸೋಂಕು ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತ ಆದೇಶಿಸಿದ್ದು, ಈ ಹಂದಿ ಸಾಕಾಣಿಕ ಕೇಂದ್ರದ 1 ಕಿ.ಮೀ ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಮತ್ತು 10 ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ.
ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ಆದೇಶಿಸಲಾಗಿದ್ದು, ರೋಗ ಪೀಡಿತ ಹಂದಿ ಫಾರಂನಿಂದ 10 ಕಿ.ಮೀ. ಒಳಗಿನ ಎಲ್ಲಾ ಹಂದಿ ಸಾಕಾಣೆದಾರರು ಹೊಸದಾಗಿ ಹಂದಿಗಳನ್ನು ಬೇರೆ ಕಡೆಯಿಂದ ತರಬಾರದು. ಹಂದಿಗಳ ಮತ್ತು ಹಂದಿ ಸಾಕಾಣಿಕಾ ಕೇಂದ್ರಗಳಲ್ಲಿನ ಕೆಲಸಗಾರರ ಸಂಚಾರವನ್ನು ನಿಯಂತ್ರಿಸಬೇಕು ಎಂದು ಸೂಚಿಸಲಾಗಿದೆ.
ಕಡ್ಡಾಯವಾಗಿ ಅಂತಹ ಆಹಾರ ಪದಾರ್ಥವನ್ನು ಕವಿಷ್ಟ 20 ನಿಮಿಷಗಳ ಕಾಲ ಬೇಯಿಸಿ ಕೊಡಬೇಕು. ಹಂದಿ ಮಾಂಸದ ಹೋಟೆಲ್ ಮತ್ತು ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿನ ಉಳಿಕೆ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಹಂದಿಗಳಿಗೆ ನೀಡಬಾರದು. ಸಂದರ್ಶಕರಿಗೆ ಹಂದಿ ಫಾರಂ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಲಾಗಿದೆ.
ಹಂದಿ ಆಹಾರ, ಇತರೆ ಸಾಮಗ್ರಿಗಳನ್ನು ಫಾರಂಗೆ ಸಾಗಿಸುವ ವಾಹನಗಳನ್ನು ಸೋಂಕು ನಿವಾರಕ ದ್ರಾವಣದಿಂದ ಶುಚಿಗೊಳಿಸಬೇಕು ಮತ್ತು ಒಂದು ಹಂದಿ ಫಾರಂನ ಕೆಲಸಗಾರರು ಬೇರೆ ಫಾರಂಗೆ ಹೋಗಬಾರದೆಂದು ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಗಾವಹಿಸಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಿ ಆಫ್ರಿಕನ್ ಹಂದಿ ಜ್ವರದ ಹತೋಟಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ