ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿ ಕೋರ್ಟ್ ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದುಗಳು ಪೂಜೆ ಮಾಡಬಹುದು ಎಂದು ತೀರ್ಪು ನೀಡಿದ ಬೆನ್ನಲ್ಲಿಯೇ ಅಲ್ಲಿ ಪೂಜಾ ಕಾರ್ಯ ನೆರವೇರಿದೆ.
ಜ್ಞಾನವಾಪಿ ಆವರಣದಲ್ಲಿ ಮಧ್ಯರಾತ್ರಿಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಯಿತು. ನೆಲಮಾಳಿಗೆಯಲ್ಲಿರುವ ವಿಗ್ರಹಕ್ಕೆ ಬುಧವಾರ ರಾತ್ರಿ 11 ಗಂಟೆಗೆ ಪೂಜೆ ನಡೆದಿದೆ. ಪೂಜೆಯ ಬಳಿಕ ಮಂಗಳಾರತಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಈ ಮೂಲಕ ಜ್ಞಾನವಾಪಿಯಲ್ಲಿ 31 ವರ್ಷಗಳ ಬಳಿಕ ಪೂಜೆ ನಡೆಯಿತು.
ಇಷ್ಟು ವರ್ಷಗಳ ಬಳಿಕ ನಡೆದ ಪೂಜೆಗೆ ವಿಶ್ವನಾಥ ದೇಗುಲ ಟ್ರಸ್ಟ್ನ 5 ಸದಸ್ಯರು ಹಾಗೂ ಅರ್ಚಕ ವ್ಯಾಸ್ ಅವರ ಕುಟುಂಬ ಭಾಗಿಯಾಗಿದೆ. ಬುಧವಾರ ಮಧ್ಯರಾತ್ರಿಯೇ ಹರಹರ ಮಹದೇವ ಘೋಷಣೆ ಮೊಳಗಿದೆ. ಗಂಗಾಜಲದ ಅಭಿಷೇಕದ ಮೂಲಕ ಮೊದಲ ಪೂಜೆ ನಡೆಸಲಾಗಿದೆ. ಬುಧವಾರವಷ್ಟೇ ವಾರಣಾಸಿ ಜಿಲ್ಲಾ ಕೋರ್ಟ್, ಜ್ಞಾನವಾಪಿಉಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು.
Puja started at gyanvyapi pic.twitter.com/ZjcWYnklCG
— Vishnu Shankar Jain (@Vishnu_Jain1) February 1, 2024
ಕೋರ್ಟ್ ಆದೇಶ ನೀಡಿದ 8 ಗಂಟೆಯೊಳಗೆ ಜ್ಞಾನವಾಪಿಯಲ್ಲಿ ಪೂಜಾ ಕಾರ್ಯ ನಡೆದಿದೆ. ಇದಕ್ಕೂ ಮುನ್ನ ಕಾಶಿ ವಿಶ್ವನಾಥ ಟ್ರಸ್ಟ್ ಸಿಬ್ಬಂದಿಯಿಂದ ನೆಲಮಹಡಿ ಸ್ವಚ್ಛತಾ ಕಾರ್ಯ ನಡೆದಿದೆ. ಮೂಲ ದೇಗುಲ ಅರ್ಚಕರಾದ ಜಿತೇಂದ್ರನಾಥ ವ್ಯಾಸ್ ಕುಟುಂಬದಿಂದ ಜ್ಞಾನವಾಪಿಯ ಪೂಜೆ ನಡೆದಿದೆ. ನೆಲಮಹಡಿಯಲ್ಲಿದ್ದ ಗಣೇಶ, ಲಕ್ಷ್ಮೀ ದೇವಿಗೆ ಅರ್ಚಕರು ಆರತಿ ಬೆಳಗಿದ್ದಾರೆ.
ಜ್ಞಾನವಾಪಿ ಪೂಜೆ ಟೈಮ್ ಲೈನ್:
ಬುಧವಾರ ಮಧ್ಯಾಹ್ನ 3 ಗಂಟೆ: ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆಗೆ ವಾರಾಣಸಿ ಕೋರ್ಟ್ ಗ್ರೀನ್ ಸಿಗ್ನಲ್
ಸಂಜೆ 5 ಗಂಟೆ: :ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ
ಸಂಜೆ 7 ಗಂಟೆ: ಜ್ಞಾನವಾಪಿ ಪರಿಸರದಲ್ಲಿ ಭದ್ರತೆ ಹೆಚ್ಚಳಕ್ಕೆ ಸೂಚನೆ.
ರಾತ್ರಿ 8.15: ಕಾಶಿ ವಿಶ್ವನಾಥ ದೇಗುಲಕ್ಕೆ ಜಿಲ್ಲಾಧಿಕಾರಿ ಭೇಟಿ.
ರಾತ್ರಿ 9 : ದೇಗುಲದ ಐವರು ಅರ್ಚಕರಿಗೆ ಬುಲಾವ್.
ರಾತ್ರಿ 10.30: ಬ್ಯಾರಿಕೇಡ್ ತೆರವು, ಸ್ವಚ್ಛತಾ ಕಾರ್ಯ. ದೇಗುಲಕ್ಕೆ ಬಂದ ಅರ್ಚಕರು.
ರಾತ್ರಿ 11.00 : 31 ವರ್ಷಗಳ ನಂತರ ಜ್ಞಾನವಾಪಿಯಲ್ಲಿ ನಡೆದ ಪೂಜೆ