ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಉಗ್ರ ಚಟುವಟಿಕೆಗಳು ಶೇ.168ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
2015ರ ಬಳಿಕ ನರೇಂದ್ರ ಮೋದಿ ಅವರು ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದಾರೆ.ಇದರಿಂದ ಜಮ್ಮು ಕಾಶ್ಮೀರದ ಕಣಿವೆಯಲ್ಲಿ ಶೇ.168ರಷ್ಟು ಉಗ್ರ ಚಟುವಟಿಕೆ ಇಳಿಕೆಯಾಗಿದೆ. ಅಷ್ಟೇ ಅಲ್ಲದೆ ಎಡಪಂಥೀಯ ತೀವ್ರವಾದದ ಘಟನೆಗಳು ಕೂಡ ಶೇ.265ರಷ್ಟು ಇಳಿಕೆಯಾಗಿವೆ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ.
2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಳ್ಳಲಾಯಿತು. 2019ರಲ್ಲಿ ಪುಲ್ವಾಮ ದಾಳಿ ಬಳಿಕ ಬಾಲಾಕೋಟ್ ದಾಳಿ ಮಾಡಲಾಯಿತು. ಇಂತಹ ದಾಳಿಗೆ ಪ್ರತಿದಾಳಿ ಕ್ರಮಗಳಿಂದಾಗಿ ಕಣಿವೆಯಲ್ಲಿ ಶೇ.80ರಷ್ಟು ಹಿಂಸಾಚಾರ ಕಡಿಮೆಯಾಗಿದೆ. ನಾಗರಿಕರ ಹತ್ಯೆಗಳು ಶೇ.89ರಷ್ಟು ಕಡಿಮೆಯಾಗಿದ್ದು, ಇದುವರೆಗೆ 6 ಸಾವಿರ ಉಗ್ರರು ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಿದ ಅನುರಾಗ್ ಠಾಕೂರ್ , ಕೇಂದ್ರ ಸರ್ಕಾರವು ಯು.ಎ.ಪಿ.ಎ.ಯನ್ನು ಬಲಪಡಿಸುವ ಮೂಲಕ, ಕಾನೂನು ರಂಗದಲ್ಲಿ ಸಾಕಷ್ಟು ಕೆಲಸ ಮಾಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಕಾಯ್ದೆಯನ್ನು ಪರಿಚಯಿಸುವ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನಿಜವಾದ ಫೆಡರಲ್ ರಚನೆಯನ್ನು ನೀಡುವ ಮೂಲಕ ಮತ್ತು ಈ ಕ್ರಮಗಳ ಸಾಮೂಹಿಕ ಪರಿಣಾಮವು ಭಯೋತ್ಪಾದನೆಯ ಪರಿಸರ ವ್ಯವಸ್ಥೆಯನ್ನು ದುರ್ಬಲಗೊಳಿಸುವಲ್ಲಿ ಯಶಸ್ಸು ಕಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮತ್ತು ಸಭೆಗಳಲ್ಲಿ ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಒಂದಾಗುವಂತೆ ಜಗತ್ತನ್ನು ಒತ್ತಾಯಿಸಿದ್ದಾರೆ. 2000 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳ ಭಾಗವಹಿಸಿದ್ದ 90 ನೇ ಇಂಟರ್ಪೋಲ್ ಜನರಲ್ ಅಸೆಂಬ್ಲಿಯ ಸಮಾರೋಪ ಕಾರ್ಯಕ್ರಮವು ‘ಭಯೋತ್ಪಾದನಾ ಕಾಯ್ದೆ ವಿರುದ್ಧ ಜಾಗತಿಕ ಕ್ರಮ’ ಘೋಷಣೆಯೊಂದಿಗೆ ಕೊನೆಗೊಂಡಿತು ಎಂದು ಠಾಕೂರ್ ಹೇಳಿದ್ದಾರೆ.
ಮೋದಿ ಅವರು ಪ್ರಧಾನಿಯಾದ ಬಳಿಕ ಈಶಾನ್ಯ ಭಾರತದಲ್ಲಿ ಶಾಂತಿಯ ವಾತಾವರಣವನ್ನು ಸೃಷ್ಟಿಯಾಯಿತು. 2014 ರಿಂದ ಭಾರತದ ಈಶಾನ್ಯ ಪ್ರದೇಶದಲ್ಲಿ ಶಾಂತಿಯ ಯುಗವು ಉದಯಿಸಿದೆ. ಬಂಡಾಯ/ ಉಗ್ರ ಹಿಂಸಾಚಾರವು 80 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಮತ್ತು ನಾಗರಿಕರ ತೀವ್ರ ಸಾವು-ನೋವುಗಳಲ್ಲಿ 89 ಪ್ರತಿಶತದಷ್ಟು ಕುಸಿತವನ್ನು ಕಂಡಿವೆ. 2014 ರಿಂದ ಸುಮಾರು ಆರು ಸಾವಿರ ಉಗ್ರಗಾಮಿಗಳ ಶರಣಾಗತಿಯ ಸಾಧನೆ ಇದಕ್ಕೆ ಪೂರಕವಾಗಿದೆಎಂದು ವಿವರಿಸಿದರು.
ಕೇಂದ್ರ ಸರಕಾರ ಭಯೋತ್ಪಾದನೆಯನ್ನು ಎದುರಿಸಲು ಸಶಸ್ತ್ರ ಕ್ರಮವನ್ನು ಮೀರಿ ಹೋಗಲು ಬದ್ಧ. ಈ ಮೂಲಕ ದೇಶದಾದ್ಯಂತ ಶಾಶ್ವತ ಶಾಂತಿಯ ವಾತಾವರಣವನ್ನು ಸೃಷ್ಟಿಸಲು ಪೂರಕ ಕೆಲಸ ಮಾಡಿದೆ. ಈ ಶಾಂತಿ ಉಪಕ್ರಮಗಳು ಕೇಂದ್ರ ಸರ್ಕಾರದ ಸಾಧನೆಗಳ ಪರಂಪರೆಯಾಗಿದೆ ಎಂದರು.