ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ರಾಜಕೀಯದಲ್ಲಿ ಹೊಸ ಚರ್ಚೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಾರಣರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಆಂಜನೇಯನ ಭಕ್ತಿಭಾವದ ಪೋಸ್ಟ್ ಈಗ ರಾಜಕೀಯ ವಲಯದಲ್ಲಿ ವಿಭಿನ್ನ ರೀತಿಯ ಚರ್ಚೆಗೆ ಗ್ರಾಸವಾಗಿದೆ.
ಬೆಳಗಿನ ಜಾವ ತಮ್ಮ ಎಕ್ಸ್ ಖಾತೆಯಲ್ಲಿ ಪವನಪುತ್ರ ಮಾರುತಿಯ ಚಿತ್ರವನ್ನು ಹಂಚಿಕೊಂಡ ಅಖಿಲೇಶ್, ಭಕ್ತಿ ಮತ್ತು ಆತ್ಮವಿಶ್ವಾಸ ತುಂಬಿದ ಸಂದೇಶವನ್ನೂ ಪೋಸ್ಟ್ ಮಾಡಿದ್ದಾರೆ. ದೇವರ ಆಶ್ರಯ ಪಡೆದರೆ ಭಯ ದೂರವಾಗುತ್ತದೆ, ಮನಸ್ಸಿನಲ್ಲಿರುವ ಸಂಕಟಗಳು ನಿವಾರಣೆಯಾಗುತ್ತವೆ ಎಂಬ ಅರ್ಥದ ಸಾಲುಗಳು ಆ ಪೋಸ್ಟ್ನಲ್ಲಿ ಗಮನ ಸೆಳೆದಿವೆ.
ಇದನ್ನೂ ಓದಿ:
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ರಾಜಕೀಯ ಅರ್ಥ ಹುಡುಕಲು ಆರಂಭಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ದೇವರ ನೆನಪು ಬಂತಾ ಎಂಬ ಪ್ರಶ್ನೆಗಳ ಜೊತೆಗೆ, ಸಂಕಷ್ಟದ ಸಮಯದಲ್ಲಿ ನಾಯಕರು ದೇವರ ಮೊರೆ ಹೋಗುವುದು ಸಾಮಾನ್ಯ ಎನ್ನುವ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ದೇಶದ ರಾಜಕೀಯ ಚಟುವಟಿಕೆಗಳು ವೇಗ ಪಡೆದಿರುವ ಹೊತ್ತಿನಲ್ಲಿ ಅಖಿಲೇಶ್ ಅವರ ಈ ಪೋಸ್ಟ್ ಕುತೂಹಲ ಹೆಚ್ಚಿಸಿದೆ. ಇದು ಕೇವಲ ಭಕ್ತಿಯ ಅಭಿವ್ಯಕ್ತಿಯೇ, ಅಥವಾ ರಾಜಕೀಯ ಸಂದೇಶವೇ ಎಂಬ ಚರ್ಚೆ ಈಗ ಜೋರಾಗಿದೆ.



