ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಾಲಿವುಡ್ನಲ್ಲಿ ಸತತ ಸೋಲುಗಳು ಎದುರಾಗುತ್ತಿರುವುದು ಗೊತ್ತೇ ಇದೆ. ಸತತ ಸೋಲುಗಳಿಂದ ಬಾಲಿವುಡ್ ಇಂಡಸ್ಟ್ರಿ ನಷ್ಟ ಅನುಭವಿಸುತ್ತಿದೆ. ಅಲ್ಲಿನ ಸ್ಟಾರ್ ಹೀರೋಗಳು ಪ್ರತಿ ಚಿತ್ರಕ್ಕೆ 50 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಚಿತ್ರದ ಫಲಿತಾಂಶವನ್ನು ಲೆಕ್ಕಿಸದೆ ಅವರ ಸಂಭಾವನೆ ತೆಗೆದುಕೊಳ್ಳಲಾಗುತ್ತದೆ. ಇದು ನಿರ್ಮಾಪಕರಿಗೆ ಹೆಚ್ಚು ಹೊರೆಯಾಗಿ ಪರಿಣಮಿಸಿದೆ.
ಜೊತೆಗೆ ಬಾಯ್ಕಾಟ್ ಎಂಬ ಪದ ಬಾಲಿವುಡ್ನವರಿಗೆ ನುಂಗಲಾರದ ಬಿಸಿ ತುಪ್ಪುವಾಗಿದೆ. ಹಾಗಾಗಿ ಒಬ್ಬೊಬ್ಬರಾಗಿಯೇ ರೆಮ್ಯನರೇಷನ್ ಇಳಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಮೀರ್ ಖಾನ್ ಸಿನಿಮಾಗಳು ಸೋತಾಗ ಸಂಭಾವನೆಯನ್ನು ಸ್ವಲ್ಪ ಕಡಿಮೆ ಮಾಡಿ ಸಿನಿಮಾದ ಲಾಭದಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದರು. ಇದರಿಂದ ನಿರ್ಮಾಪಕರಿಗೆ ಲಾಭವಾಗುತ್ತಿತ್ತು. ಇದೀಗ ಅಕ್ಷಯ್ ಕುಮಾರ್ ಈ ಹಾದಿಯನ್ನು ಹಿಡಿದಿದ್ದಾರೆ. ಅಕ್ಷಯ್ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರಲ್ಲಿ ಒಬ್ಬರು. ಅಕ್ಷಯ್ ಪ್ರತಿ ಚಿತ್ರಕ್ಕೆ ಸುಮಾರು 70 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ‘ರಕ್ಷಾಬಂಧನ’ ಚಿತ್ರವೂ ಸೋತ ಹಿನ್ನೆಲೆಯಲ್ಲಿ ಅಕ್ಷಯ್ ಈ ನಿರ್ಧಾರ ಕೈಗೊಂಡಿದ್ದಾರೆ. ಮುಂಬರುವ ಚಿತ್ರಗಳಿಗಾಗಿ ಅರ್ಧಕ್ಕಿಂತ ಹೆಚ್ಚು ಸಂಭಾವನೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಸಂಭಾವನೆ ಕಡಿಮೆಯಾದರೂ ಚಿತ್ರ ಹಿಟ್ ಆಗಿ ಲಾಭ ಬಂದರೆ ಪಾಲು ಕೊಡಬೇಕು ಎಂದಿದ್ದಾರೆ. ಅಕ್ಷಯ್ ನಿರ್ಧಾರವನ್ನು ನಿರ್ಮಾಪಕರು ಸ್ವಾಗತಿಸಿದ್ದಾರೆ. ಇದರಿಂದ ಚಿತ್ರದ ವೆಚ್ಚ ಸಾಕಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಅಕ್ಷಯ್ ಅವರಂತೆ ಉಳಿದ ಸ್ಟಾರ್ ಹೀರೋಗಳೂ ಇದೇ ಹಾದಿಯಲ್ಲಿ ಸಾಗಿ ಬಾಲಿವುಡ್ ಗೆ ಹಿಟ್ ಕೊಡುತ್ತಾರೋ ಇಲ್ಲವೋ ನಷ್ಟವನ್ನಾದರೂ ಕಡಿಮೆ ಮಾಡುತ್ತಾರೋ ನೋಡಬೇಕು.