ಕರಣಿ ಸೇನೆ ಒತ್ತಡಕ್ಕೆ ಮಣಿದು ಹೆಸರು ಬದಲಾಯಿಸಿದ ‘ಪೃಥ್ವಿರಾಜ್ʼ ಚಿತ್ರತಂಡ!: ಚಿತ್ರದ ಹೊಸ ಟೈಟಲ್‌ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಜಪೂತ ಕರಣಿ ಸೇನಾ ಸಂಘಟನೆಯ ಒತ್ತಡಕ್ಕೆ ಮಣಿದು ಬಾಲಿವುಡ್‌ ನ ‘ಪೃಥ್ವಿರಾಜ್’ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ.
ಪೃಥ್ವಿರಾಜ್ ಚಿತ್ರವು ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಆಧರಿಸಿ ನಿರ್ಮಾಣವಾದ ಚಿತ್ರ. ಈ ಚಿತ್ರಕ್ಕೆ ಯಶ್‌ ರಾಜ್‌ ಫಿಲ್ಮ್ಸ್‌ ಬಂಡವಾಳ ಹೂಡಿದ್ದು, ಅಕ್ಷಯ್‌ ಕುಮಾರ್‌, ಮಾನುಷಿ ಚಿಲ್ಲರ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಬಿಡುಗಡೆಗೆ ಮುನ್ನ ತೋರಿಸುವಂತೆ ಹಾಗೂ ಶೀರ್ಷಿಕೆಯನ್ನು ʼವೀರಯೋಧ ಸಾಮ್ರಾಟ್‌ ಪೃಥ್ವಿರಾಜ್‌ ಚೌಹಾಣ್‌ʼ ಎಂದು ಬದಲಿಸುವಂತೆ ರಜಪೂತ ಕರಣಿ ಸೇನೆ ಪಟ್ಟು ಹಿಡಿದಿತ್ತು. ಈದೇ ವಿಚಾರವಾಗಿ ಸೇನೆಯು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಹ ದಾಖಲಿಸಿತ್ತು.
ಇದೀಗ ಕರಣಿ ಸೇನೆಯ ಒತ್ತಡಕ್ಕೆ ಮಣಿದಿರುವ ಚಿತ್ರತಂಡ ಚಿತ್ರದ ಹೆಸರನ್ನು ‘ಸಾಮ್ರಾಟ್ ಪೃಥ್ವಿರಾಜ್’ ಎಂದು ಬದಲಾಯಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯಶ್‌ ರಾಜ್‌ ಫಿಲ್ಮ್ಸ್‌, ಹಲವು ಸುತ್ತಿನ ಚರ್ಚೆಗಳ ನಂತರ ವಿವಾದವನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ನಾವು ಚಿತ್ರದ ಶೀರ್ಷಿಕೆ ಬದಲಿಸಿದ್ದೇವೆ. ಚಿತ್ರ ಬಿಡುಗಡೆಗೆ ಮುನ್ನ ಕರಣಿ ಸೇನೆ ಹಾಗೂ ರಜಪೂತ ಸಮುದಾಯಕ್ಕೆ ಚಿತ್ರವನ್ನು ತೋರಿಸಿ ಚಿತ್ರದಲ್ಲಿ ಆಕ್ಷೇಪಾರ್ಹ ದೃಶ್ಯಗಳಿಲ್ಲ ಎಂಬ ವಿಚಾರವನ್ನು ಮನದಟ್ಟು ಮಾಡಿಸಲಾಗಿದೆ ಎಂದು ಹೇಳಿದೆ. ಪೃಥ್ವಿರಾಜ್ ಚಿತ್ರ ಜೂನ್‌ 3 ರಂದು ಬಿಡುಗಡೆ ಕಾಣಲಿದೆ.
ಕರಣಿ ಸೇನೆ ಚಿತ್ರವೊಂದರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇನು ಮೊದಲಲ್ಲ. ಈ ಹಿಂದೆ ಪದ್ಮಾವತ್‌ ಚಿತ್ರ ಬಿಡುಗಡೆ ವೇಳೆಯೂ ಆಕ್ಷೇಪ ವ್ಯಕ್ತಪಡಿಸಿತ್ತು. ಚಿತ್ರದಲ್ಲಿ ಅಕ್ಷೇಪಾರ್ಹ ದೃಶ್ಯಗಳಿವೆ ಎಂದು ಆರೋಪಿಸಿ ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ್ದರು. ಹಾಗೂ ಚಿತ್ರದ ಹೆಸರನ್ನು ಪದ್ಮಾವತ್‌ ಎಂದು ಬದಲಿಸಲು ಆಗ್ರಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!