ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಆಚರಣೆಯ ಸಂದರ್ಭದಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡುವುದು ಸಾಮಾನ್ಯ. ಛತ್ತೀಸ್ಗಢ ರಾಜ್ಯದ ಧಮ್ತಾರಿ ಮುನ್ಸಿಪಲ್ ಕಾರ್ಪೊರೇಷನ್ ಸಮೀಪದಲ್ಲಿ ಬರುವ ರಾಮ್ಲೀಲಾ ಮೈದಾನದಲ್ಲಿ ರಾವಣನ ಹತ್ತು ತಲೆಗಳು ದಹನವಾಗಲಿಲ್ಲ ಎಂದು ಒಬ್ಬ ಉದ್ಯೋಗಿಯನ್ನು ಅಮಾನತುಗೊಳಿಸಿ, ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದೆ.
ಇದೇ ತಿಂಗಳ 5ರಂದು ದೇಶಾದ್ಯಂತ ದಸರಾ ಆಚರಣೆಗಳು ಅದ್ದೂರಿಯಾಗಿ ನಡೆದವು. ಹಾಗೆಯೇ ಧಮ್ತಾರಿ ಪಟ್ಟಣದ ರಾಮಲೀಲಾ ಮೈದಾನದಲ್ಲಿ ಧಮ್ತಾರಿ ಮುನ್ಸಿಪಲ್ ಕಾರ್ಪೊರೇಷನ್ ಆಶ್ರಯದಲ್ಲಿ ರಾವಣನ ಪ್ರತಿಕೃತಿ ದಹನ ಕ್ರಿಯೆ ನಡೆಯಿತು. ಇಡೀ ರಾವಣನ ಪ್ರತಿಕೃತಿ ಸುಟ್ಟು ಹತ್ತು ತಲೆಗಳು ಮಾತ್ರ ಹಾಗೆಯೇ ಉಳಿದುಕೊಂಡವು. ಇದರಿಂದ ಕೋಪಗೊಂಡ ಧಮ್ತಾರಿ ಮುನ್ಸಿಪಲ್ ಕಾರ್ಪೊರೇಷನ್ ತಮ್ಮ ಹೆಸರನ್ನು ಹಾಳುಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದೆ.
ಇಲ್ಲಿಗೆ ನಿಲ್ಲದೆ ಮೂರ್ತಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಗುಮಾಸ್ತ ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ. ಇಂಜಿನಿಯರ್ ವಿಜಯ್ ಮೆಹ್ರಾ, ಸಬ್ ಇಂಜಿನಿಯರ್ಸ್ ಲೋಮಸ್ ದೇವಾಂಗನ್, ಕಮಲೇಶ್ ಠಾಕೂರ್ ಮತ್ತು ಕಾಮತ ನಾಗೇಂದ್ರ ಎಂಬ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಕಳುಹಿಸಲಾಗಿದೆ. ಇವರನ್ನು ಹೊರತುಪಡಿಸಿ ಪ್ರತಿಮೆಯನ್ನು ಮಾಡಿದವರ ವಿರುದ್ಧ ಕೂಡಾ ಕ್ರಮ ಕೈಗೊಳ್ಳಲಾಗುವುದು ಎಂದು ಧಮ್ತಾರಿ ಮೇಯರ್ ವಿಜಯ್ ದೇವಗನ್ ಹೇಳಿದ್ದಾರೆ.