ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಸಮನ್ವಯ ಬೈಠಕ್ ಈ ವರ್ಷ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದೆ. ಮೂರು ದಿನಗಳ ಈ ಸಮನ್ವಯ ಬೈಠಕ್ 14, 15 ಮತ್ತು 16 ಸೆಪ್ಟೆಂಬರ್ 2023 ರಂದು ನಡೆಯಲಿದೆ. ಅಖಿಲ ಭಾರತೀಯ ಮಟ್ಟದ ಈ ಸಮನ್ವಯ ಬೈಠಕ್ ವರ್ಷಕ್ಕೊಮ್ಮೆ ನಡೆಯುತ್ತದೆ.
ಈ ಬೈಠಕ್ ನಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಎಲ್ಲಾ ಐವರು ಸಹ ಸರಕಾರ್ಯವಾಹರು ಉಪಸ್ಥಿತರಿರುತ್ತಾರೆ. ಇತರ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಘಪ್ರೇರಿತ 36 ವಿವಿಧ ಸಂಘಟನೆಗಳ ಪ್ರಮುಖರು ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ, ವನವಾಸಿ ಕಲ್ಯಾಣ ಆಶ್ರಮ, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಜನತಾ ಪಾರ್ಟಿ, ಭಾರತೀಯ ಕಿಸಾನ್ ಸಂಘ, ವಿದ್ಯಾ ಭಾರತಿ, ಭಾರತೀಯ ಮಜ್ದೂರ್ ಸಂಘ, ಸಂಸ್ಕಾರ ಭಾರತಿ, ಸೇವಾ ಭಾರತಿ, ಸಂಸ್ಕೃತ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಸೇರಿದಂತೆ ಇತರ ಪ್ರಮುಖ ಸಂಘಟನೆಗಳು ಈ ಬೈಠಕ್ ನಲ್ಲಿ ಭಾಗವಹಿಸಲಿವೆ. ಈ ಸಂಘಟನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪದಾಧಿಕಾರಿಗಳು ಸೇವೆ, ಸಮರ್ಪಣೆ ಮತ್ತು ದೇಶಭಕ್ತಿಯೊಂದಿಗೆ ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿತ್ತಾರೆ. ಕಳೆದ ವರ್ಷ ಈ ಬೈಠಕ್ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದಿತ್ತು.
ಈ ಬೈಠಕ್ ನಲ್ಲಿ ಭಾಗವಹಿಸುವ ಎಲ್ಲಾ ಸಂಘಟನೆಗಳು ಸಾಮಾಜಿಕ ಜೀವನದ ವಿವಿಧ ಅಂಶಗಳ ಬಗೆಗೆ ತಮ್ಮ ಅನುಭವ ಮತ್ತು ಕೆಲಸದ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ. ಬೈಠಕ್ನಲ್ಲಿ ಪ್ರಸ್ತುತ ರಾಷ್ಟ್ರೀಯ ಸನ್ನಿವೇಶದ ಜೊತೆಗೆ ಸಾಮಾಜಿಕ ಸಾಮರಸ್ಯ, ಪರಿಸರ, ಕುಟುಂಬ ಪ್ರಬೋಧನಾ, ಸೇವಾ ಕಾರ್ಯ, ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು. ಸಾಮಾಜಿಕ ಪರಿವರ್ತನೆಯ ವಿವಿಧ ಕ್ಷೇತ್ರಗಳಲ್ಲಿ ಮಾಡಬೇಕಾಗಿರುವ ವಿಷಯಗಳ ಕುರಿತು ಚರ್ಚಿಸಲಾಗುವುದು.