ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ವಿರೋಧಿ ಹೇಳಿಕೆಗೆ ಆಕ್ರೋಶ ಹೊರಹಾಕಿರುವ ಅಯೋಧ್ಯೆಯ ತಪಸ್ವಿ ಮಹಂತ್ ಪರಮಹಂಸ ದಾಸ್ ಅವರು ತಮಿಳುನಾಡು ಸಚಿವರ ಶಿರಚ್ಛೇದ ಮಾಡುವವರಿಗೆ 10 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಅವರು ಸೋಮವಾರ ಸಾಂಕೇತಿಕವಾಗಿ ಉದಯನಿಧಿ ಸ್ಟಾಲಿನ್ ಅವರ ಶಿರಚ್ಛೇದ ಮಾಡಿದರು. ಯಾರೂ ಉದಯನಿಧಿ ಸ್ಟಾಲಿನ್ ಅವರನ್ನು ಕೊಲ್ಲಲು ಧೈರ್ಯ ಮಾಡದಿದ್ದರೆ, ಅವರನ್ನು ಹುಡುಕಿ ತಾನೇ ಕೊಲ್ಲುವುದಾಗಿ ಪರಮಹಂಸ ಆಚಾರ್ಯ ಹೇಳಿದರು.
ಕಳೆದ 2,000 ವರ್ಷಗಳಲ್ಲಿ ಅನೇಕ ಧರ್ಮಗಳು ಬಂದು ಹೋದರೂ ಭೂಮಿಯ ಮೇಲೆ ಒಂದೇ ಒಂದು ಧರ್ಮ ಸ್ಥಿರವಾಗಿ ಅಸ್ತಿತ್ವದಲ್ಲಿದೆ ಎಂದರೆ ಅದು ‘ಸನಾತನ ಧರ್ಮ’. ಸನಾತನ ಧರ್ಮಕ್ಕೆ ಅಂತ್ಯ ಎಂಬುದಿಲ್ಲ, ಅದು ಎಂದಿಗೂ ನಾಶವಾಗುವುದಿಲ್ಲ, ಅದನ್ನು ಯಾರಿಂದಲೂ ನಾಶಮಾಡಲಾಗುವುದಿಲ್ಲ ಎಂದು ತಪಸ್ವಿ ಖಡಕ್ ಎಚ್ಚರಿಕೆ ನೀಡಿದರು.
ತನ್ನ ತಲೆಗೆ ಬಹುಮಾನ ಘೋಷಿಸಿದ್ದಕ್ಕೂ ಬಗ್ಗದ ಉದಯನಿಧಿ ಇಂತಹ ಬೆದರಿಕೆಗಳು ತಮಗೆ ಹೊಸದಲ್ಲ, ಈ ಬೆದರಿಕೆಗಳಿಗೆ ತಾವು ಹೆದರುವುದಿಲ್ಲ ಎಂದರು. ತಮಿಳು ಭಾಷೆಗಾಗಿ ರೈಲು ಹಳಿಯ ಮೇಲೆ ತಲೆ ಹಾಕಿದ ಕರುಣಾನಿಧಿಯವರ ಮೊಮ್ಮಗ ನಾನು. ತನ್ನ ತಲೆ ಬಾಚಿಕೊಳ್ಳಲು 10 ರೂ. ಬಾಚಣಿಗೆ ಸಾಕು ಎಂದು ಪರಮಹಂಸ ದಾಸ್ ಬೆದರಿಕೆಗೆ ವ್ಯಂಗ್ಯವಾಡಿದರು.