ಹೊಸದಿಗಂತ ವರದಿ, ಅಂಕೋಲಾ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಜಿಲ್ಲೆಯ ಜನ ಪಕ್ಷಬೇಧ ಮರೆತು ಕಾತುರರಾಗಿದ್ದು ಜಿಲ್ಲೆಯ ಬಿಜೆಪಿ ತಂಡ ಸಂಭ್ರಮದಿಂದ ಅಂಕೋಲೆಯ ಗೌರಿಕೆರೆಯಲ್ಲಿ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ ಎಂದು ಬಿಜೆಪಿ ಮಾದ್ಯಮ ವಕ್ತಾರರು ನಾಗರಾಜ ನಾಯಕ ಹೇಳಿದರು.
ಹಟ್ಟಿಕೇರಿ ಗೌರಿಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೋದಿಯವರ ಕಾರ್ಯಕ್ರಮ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ರಾಜಕೀಯ ದುರುದ್ದೇಶದಿಂದ ಅಪಪ್ರಚಾರದಲ್ಲಿ ತೊಡಗಿದವರು ಅರಿತುಕೊಳ್ಳಲಿ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರಧಾನಿ ಕಾರ್ಯಕ್ರಮಕ್ಕೆ ಜನರು ಆಗಮಿಸಲಿದ್ದು ವಾಹನ ನಿಲುಗಡೆ, ನೀರು, ಟೆಂಟ್ ಮೊದಲಾದ ವ್ಯವಸ್ಥೆಗಳನ್ನು ಕಲ್ಲಿಸಲಾಗುತ್ತಿದೆ ಈ ವಿಷಯದಲ್ಲಿ ಯಾರೂ ಆತಂಕ ಪಡುವ ಅಗತ್ಯತೆ ಇಲ್ಲ ಗುಜರಾತಿನ ಬಾರ್ಡೋಲಿಯಿಂದ ಕರ್ನಾಟಕದ ಬಾರ್ಡೋಲಿ ಅಂಕೋಲೆಗೆ ಆಗಮಿಸುತ್ತಿರುವ ಮೋದಿಯವರ ಸ್ವಾಗತಕ್ಕೆ ಸಂಭ್ರಮದಿಂದ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.
ಒಂದು ರಾಷ್ಟ್ರಕ್ಕೆ ಒಂದೇ ರಾಷ್ಟ್ರ ಧ್ವಜ, ಒಬ್ಬರೇ ಪ್ರಧಾನಿ ಎಂಬುದು ಜನಸಂಘದ ದೋರಣೆಯಾಗಿದ್ದು ಅದನ್ನು ಕಾಶ್ಮೀರದ ವಿಷಯದಲ್ಲಿ ದಿಟ್ಟ ನಿರ್ಧಾರಗಳ ಮೂಲಕ ನಿಜವಾಗಿಸಿದ, ರಾಮ ಮಂದಿರವನ್ನು ರಾಷ್ಟ್ರ ಮಂದಿರವಾಗಿಸಿದ ಶ್ರೇಷ್ಠ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದು ಇಂದು ದೇಶದಲ್ಲಿ ಇಂದು ರೈತರ ಆತ್ಮಹತ್ಯೆ ಪ್ರಕರಣಗಳು ಶೇಕಡಾ 75 ರಷ್ಟು ಕಡಿಮೆಯಾಗಿದೆ ಕಿಸಾನ್ ಸಮ್ಮಾನ ಯೋಜನೆ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ, ಕೋವೀಡ್ ಸಂದರ್ಭದಲ್ಲಿ ದೇಶದ ಜನತೆಗೆ ಲಸಿಕೆ ನೀಡುವ ಮೂಲಕ ಮಹಾಮಾರಿ ವಿರುದ್ಧ ಸಮರ ಸಾರಿದ ವಿಶ್ವದ ಶ್ರೇಷ್ಠ ನಾಯಕ ನರೇಂದ್ರ ಮೋದಿ ಅವರು ಕೋಟ್ಯಾಂತರ ದೇಶವಾಸಿಗಳ ಆತ್ಮೀಯ ನಾಯಕರ ಸ್ವಾಗತಕ್ಕೆ ಗೌರಿಕೆರೆ ಸಜ್ಜಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರಮುರುಗಳಾದ ಬಿಂದೇಶ ನಾಯಕ, ವಿ.ಎಸ್.ಭಟ್ಟ, ಗೋಪಾಲಕೃಷ್ಣ ವೈದ್ಯ, ನಾರಾಯಣ ಭಟ್ಟ ಉಪಸ್ಥಿತರಿದ್ದರು.