ಹೊಸದಿಗಂತ ವರದಿ ಹಾಸನ:
ಮಕ್ಕಳಾಗಿಲ್ಲ ಹಾಗೂ ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸಿ ಅತ್ತೆ ಮತ್ತು ಪತಿ ಕಿರುಕುಳ ನೀಡುತ್ತಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ಗೊರೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಮಲ್ಲದೇವರ ಗ್ರಾಮದ ನಯನ ಗಾಯಗೊಂಡವರು. ನಾಲ್ಕು ವರ್ಷಗಳ ಹಿಂದೆ ಆಲೂರು ತಾಲ್ಲೂಕಿನ ಮರಸು ಗ್ರಾಮದ ಶ್ರೀಧರ ಅವರನ್ನು ನಯನ ವಿವಾಹವಾಗಿದ್ದರು. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅತ್ತೆ ಸಾಕಮ್ಮ ಹಾಗೂ ಪತಿ ಶ್ರೀಧರ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಪತಿ ಬೇಕರಿ ಆರಂಭಿಸಲು ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸಿ ಹಲ್ಲೆ ಮಾಡುತ್ತಿದ್ದರು ಎಂದು ನಯನ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಸೆ.17 ರಂದು ಬೆಳಿಗ್ಗೆ ಅತ್ತೆ ಸಾಕಮ್ಮ, ಕೆಲಸ ಮಾಡಿಲ್ಲ ಎಂದು ಬೈದು ಹಲ್ಲೆ ಮಾಡಿದ್ದಾರೆ. ಬಳಿಕ ಪತಿಯನ್ನು ಕರೆದು ಅವರಿಂದಲೂ ಹಲ್ಲೆ ಮಾಡಿಸಿದ್ದಾರೆ ಬಳಿಕ ಅತ್ತೆ ತಮ್ಮ ಮೇಲೆ ಪೆಟ್ರೋಲ್ ಸುರಿದಿದ್ದಾರೆ. ಈ ವೇಳೆ ಸಮೀಪದಲ್ಲಿದ್ದ ಒಲೆಯ ಬೆಂಕಿ ಹೊತ್ತಿಕೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬೆಂಕಿಯಿಂದ ದೇಹದ ವಿವಿಧ ಭಾಗ ಸೇರಿದಂತೆ ಎರಡೂ ಕೈ-ಕಾಲುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ತಕ್ಷಣ ಸಹೋದರಿ ನಂದಿನಿ ಹಾಗೂ 108 ಆಂಬುಲೆನ್ಸ್ ಗೆ ಕರೆ ಮಾಡಲಾಗಿದ್ದು, ಕುಟುಂಬದವರು ನಯನ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಯನ ನೀಡಿದ ಹೇಳಿಕೆ ಆಧರಿಸಿ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



