ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂವಿಧಾನದ 370ನೇ ವಿಧಿಯನ್ನು ಜಮ್ಮು ಕಾಶ್ಮೀರದಿಂದ ಕಿತ್ತು ಹಾಕಿದ ನಂತರ, ಜನ ಪ್ರಾತಿನಿಧ್ಯ ಕಾಯಿದೆಯನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣವಾಗಿ ಅನುಷ್ಟಾನಿಸಲಾಗಿದ್ದು, ಸೇನಾಪಡೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಾಸವಿರುವ ನಾಗರಿಕರು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಪೂರ್ಣ ಅವಕಾಶವಿದೆ ಎಂದು ಜಮ್ಮು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಹರ್ದೇಶ್ ಕುಮಾರ್ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವ ದೇಶದ ಯಾವುದೇ ಭಾಗದ ನಾಗರಿಕರು ಮತ್ತು ಭದ್ರತಾಪಡೆ ಯೋಧರು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಲು ಅರ್ಹರು. ಕಾಶ್ಮೀರದಲ್ಲಿ ನೆಲೆಸಿದ್ದೂ ಮತದಾರರ ಪಟ್ಟಿಗೆ ಸೇರ್ಪಡೆ ಅವಕಾಶದಿಂದ ವಂಚಿತರಾದವರೂ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ವಾಸಸ್ಥಾನ ಸಂಬಂಧಿತ ಎಡರುತೊಡರುಗಳು ಮತದಾನಕ್ಕೆ ತೊಡಕಾಗುವುದಿಲ್ಲ ಎಂದು ಚುನಾವಣಾಧಿಕಾರಿ ವಿಶದಪಡಿಸಿದ್ದಾರೆ
ಕೇಂದ್ರಾಡಳಿತ ಪ್ರದೇಶದ ಅಸೆಂಬ್ಲಿ ಸೀಟುಗಳನ್ನು ಪುನರ್ ನಿಗದಿಪಡಿಸುವ ವಿಚಾರವಾಗಿ, ಜಮ್ಮು ಕಾಶ್ಮೀರದ ತ್ರಿಸದಸ್ಯ ಕ್ಷೇತ್ರ ಪುನರ್ವಿಂಗಡಣಾ ಆಯೋಗವು ಅಂತಿಮ ಆದೇಶಕ್ಕೆ ಕಳೆದ ಮೇ ತಿಂಗಳಲ್ಲಿ ಸಹಿ ಹಾಕಿತ್ತು.ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗಳಲ್ಲಿ ಸ್ಥಾನ ಬಲವನ್ನು ಹೆಚ್ಚಿಸಬೇಕೆಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರಂಜನ ಪ್ರಕಾಶ್ ನೇತೃತ್ವದ ಆಯೋಗವು ಶಿಫಾರಸು ಮಾಡಿತ್ತು.