ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ನಟ ಅಲ್ಲು ಅರ್ಜುನ್ ಪುಷ್ಪಾ-2 ರಿಲೀಸ್ ವೇಳೆ ಭೇಟಿ ನೀಡಿದ್ದರು. ಅಲ್ಲು ಬಂದ ಕಾರಣಕ್ಕೆ ಜನಸಂಖ್ಯೆ ಅತಿಯಾಗಿದ್ದು, ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದರು. ಈ ಕೇಸ್ಗೆ ಸಂಬಂಧಪಟ್ಟಂತೆ ಇಂದು ಪೊಲೀಸರು ನಟನನ್ನು ಬಂಧಿಸಿದ್ದಾರೆ.
ಮಹಿಳೆಯ ಸಾವಿಗೆ ಕಾರಣವಾದ ಕಾರಣ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದು, ಅಲ್ಲು ಅರ್ಜುನ್ ಅನ್ನು ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು ಆದರೆ ಅದು ಸುಳ್ಳಾಗಿದೆ.
ಅಲ್ಲು ಅರ್ಜುನ್ ಬಂಧನದ ಬಗ್ಗೆ ಮಾತನಾಡಿರುವ ಹೈದರಾಬಾದ್ ಸಿಪಿ ಸಿವಿ ಆನಂದ್, ‘ಚಿಕ್ಕಡಪಲ್ಲಿ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿದೆ. ಸಂಧ್ಯಾ ಥಿಯೇಟರ್ಗೆ ಅಲ್ಲು ಅರ್ಜುನ್ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಅದೇ ಕಾರಣಕ್ಕೆ ಮಹಿಳೆಯ ಸಾವಾಗಿದೆ. ಇದೀಗ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಅಲ್ಲು ಅರ್ಜುನ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ’ ಎಂದಿದ್ದಾರೆ.
ಆ ಮೂಲಕ ಅಲ್ಲು ಅರ್ಜುನ್ ಗೆ ಸ್ಟೇಷನ್ ಬೇಲ್ ನೀಡುವುದಿಲ್ಲ ಬದಲಿಗೆ ನ್ಯಾಯಾಂಗ ಬಂಧನಕ್ಕೆ ನೀಡುವುದನ್ನು ಪೊಲೀಸರು ಖಾತ್ರಿಪಡಿಸಿದ್ದಾರೆ. ಅಲ್ಲು ಅರ್ಜುನ್ ಅನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಲ್ಲಿ ಕನಿಷ್ಟ 14 ದಿನಗಳ ಕಾಲ ಅವರು ಜೈಲು ವಾಸ ಅನುಭವಿಸಬೇಕಿರುತ್ತದೆ. ಆ ಬಳಿಕ ಜಾಮೀನಿಗೆ ಅವರು ಪ್ರಯತ್ನಿಸಬಹುದಾಗಿರುತ್ತದೆ. ಕೆಲವು ಪ್ರಕರಣದಲ್ಲಿ ಮೊದಲ ದಿನವೇ ಜಾಮೀನು ದೊರೆಯುವ ಸಾಧ್ಯತೆಯೂ ಇರುತ್ತದೆ. ಅಲ್ಲು ಅರ್ಜುನ್ ಪ್ರಕರಣದಲ್ಲಿ ಏನಾಗುತ್ತದೆ ಎಂಬುದು ಸಂಜೆ ವೇಳೆಗೆ ತಿಳಿದು ಬರಲಿದೆ.