ಹೊಸದಿಗಂತ ವರದಿ, ಕಲಬುರಗಿ:
ಗ್ರಾಮೀಣ ಭಾಗದ ಅಭಿವೃದ್ಧಿಗೆ ಸದಾ ಸಿದ್ದವಾಗಿರುವೆ ಎಂದು ಚಿತಾಪುರ ಶಾಸಕ ಪ್ರಿಯಾಂಕ್ ಖಗೆ೯ ಭರವಸೆ ನೀಡಿದರು.
ಶನಿವಾರ ಜಿಲ್ಲೆಯ ಕಾಳಗಿ ತಾಲೂಕಿನ ಚಿತ್ತಾಪುರ ಮತಕ್ಷೇತ್ರದ ಅಶೋಕನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿ, 15 ಲಕ್ಷ ವೆಚ್ಚದಲ್ಲಿ ಡಾ. ಬಾಬು ಜಗಜೀವನರಾಂ ಭವನ, 15 ಲಕ್ಷ ವೆಚ್ಚದಲ್ಲಿ ಸೇವಾಲಾಲ್ ಭವನ ಉದ್ಘಾಟನೆ ಹಾಗೂ 25 ಲಕ್ಷ ವೆಚ್ಚದಲ್ಲಿ ಕೈಗತ್ತಿಕೊಳ್ಳಲಾಗುತ್ತಿರುವ ಆರ್.ಸಿ.ಬಿ ಮಖ್ಯ ಕ್ಯಾನೆಲ್ ನಿಂದ ಬೆಣ್ಣೂರು (ಕೆ) ಗ್ರಾಮದವರೆಗೆ ಆಯಕಟ್ಟು ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಾಯಿತು.
ಬಿಜೆಪಿ ಸರ್ಕಾರದಲ್ಲಿ ಅಭಿವೃದ್ದಿಗೆ ಹಿನ್ನೆಡೆಯಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ ಸಿ ಪಿ / ಟಿಎಸ್ ಪಿ ಅಡಿಯಲ್ಲಿ 28,000 ಕೋಟಿ ನಿಗದಿಪಡಿಸಿ ಎಸ್ ಸಿ ಹಾಗೂ ಎಸ್ ಟಿ ಜನಾಂಗದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ.
ಗ್ರಾಮಗಳ ಅಭಿವೃದ್ದಿಗೆ ನಾನು ಸದಾ ಸಿದ್ದನಿದ್ದು ನಿಮ್ಮ ಸೇವೆಗೆ ಬದ್ಧನಾಗಿದ್ದೇನೆ. ಈ ಸರ್ಕಾರದ ನಿರ್ಲಕ್ಷ್ಯತನದ ನಡುವೆಯೂ ಅನುದಾನ ಮಂಜೂರು ಮಾಡಿಸಿಕೊಂಡು ಭವನಗಳ ನಿರ್ಮಾಣ ಮಾಡುತ್ತಿದ್ದೇನೆ. ರಸ್ತೆನಿರ್ಮಾಣ ಹಾಗೂ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೂ ಆದ್ಯತೆ ನೀಡುತ್ತೇನೆ. ನಾನು ನಿಮ್ಮ ಕೆಲಸ ಮಾಡುತ್ತೇನೆ, ನೀವು ನನಗೆ ಅಶೀರ್ವಾದ ಮಾಡಿ. ಆದರೆ, ಜೂಜುಕೋರರು, ಅಕ್ರಮ ಮರುಳು ಸಾಗಾಣಿಕೆ ಮಾಡುವವರನ್ನು ಮಾತ್ರ ಬೆಂಬಲಿಸಬೇಡಿ. ಅವರ ಕೈಗೆ ಅಧಿಕಾರ ಕೊಡಬೇಡಿ, ಅವರಿಂದ ದೂರವಿರಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದು ಪಾಟೀಲ್, ಶಿವರಾಜ್ ಪಾಟೀಲ್ ಕಲಗುರ್ತಿ, ಬಸವರಾಜ್ ಹೊಸಳ್ಳಿ, ಮಲ್ಲಪ್ಪ ಹೊಸಮನಿ, ಕೃಷ್ಣ ಕಟ್ಟಿಮನಿ, ರಾಕೇಶ್ ಕಟ್ಟಿಮನಿ, ಪ್ರವೀಣ್ ನಾಮದಾರ್ ಮತ್ತಿತರಿದ್ದರು.