ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಸ್ ಪೋರ್ಟ್ ಬಚ್ಚಿಟ್ಟು ತನ್ನನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದ ಯೆಮನ್ ದೇಶದ ಮಾಲೀಕನನ್ನು ಕೊಲೆ ಮಾಡಿರುವ ಆರೋಪದಡಿಯಲ್ಲಿ ಕೇರಳದ ಮಹಿಳೆಯೊಬ್ಬರಿಗೆ ಯೆಮನ್ ದೇಶ ಗಲ್ಲು ಶಿಕ್ಷೆ ವಿಧಿಸಿದೆ. 2017 ರಲ್ಲಿ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹದಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ನಿಮಿಷಾ ಪ್ರಿಯಾಗೆ ಯೆಮೆನ್ನಲ್ಲಿ ಕಾನೂನಿನ ಮೂಲಕ ಮರಣದಂಡನೆ ವಿಧಿಸಲಾಗಿದೆ.
ಈ ಸಂಬಂಧ ಆಕೆಯನ್ನು ಉಳಿಸಕೊಳ್ಳಲು ನಿಮಿಷಾ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ನಿಮಿಷಾ ಪ್ರಿಯಾ ಅವರ ತಾಯಿ ಮತ್ತು ಅವರ ಮಗಳು ಸೇರಿದಂತೆ ಇತರ ನಾಲ್ವರು ಸೇರಿ ʻಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್ʼ ಎಂಬ ಸಂಘ ರಚಿಸಿದ್ದಾರೆ. ಈ ಮೂಲಕ ಭಾರತ ಸರ್ಕಾರ ರಾಜತಾಂತ್ರಿಕ ಸಮಾಲೋಚನೆ ನಡೆಸಿ ನಿಮಿಷಾ ಪ್ರಿಯ ಅವರನ್ನು ಬಿಡಿಸಿ ಕರೆತರುವಂತೆ ಕುಟುಂಬ ಸದಸ್ಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದ ನಿಮಿಷ ಆಕುಟುಂಬಕ್ಕೆ ನ್ಯಾಯಾಲಯ ಶಾಕ್ ನೀಡಿದೆ. ಏಪ್ರಿಲ್ 11 ರಂದು ವಿಚಾರಣೆ ನಡೆಸಿದ ದಹಲಿ ಹೈಕೋರ್ಟ್, ನಿಮಿಷಾ ಪ್ರಿಯಾ ಅವರ ಮರಣದಂಡನೆ ಕುರಿತು ರಾಜತಾಂತ್ರಿಕ ಸಮಾಲೋಚನೆ ನಡೆಸುವಂತೆ ಭಾರತ ಸರ್ಕಾರಕ್ಕೆ ಆದೇಶಿಸಲಾಗುವುದಿಲ್ಲ ಮತ್ತು ಕಾನೂನು ನೆರವು ನೀಡುವಂತೆ ಹೇಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ನಿಮಿಷಾ ಬಿಡುಗಡೆಗಾಗಿ ಯೆಮೆನ್ನಲ್ಲಿರುವ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ. ಕ್ಷಮೆ ಕೂಡ ಕೇಳುತ್ತೇವೆ ಎಂದು ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ನೀವು ಯೆಮೆನ್ಗೆ ಹೋಗಬೇಕಾದರೆ ಹೋಗಬಹುದು, ನಿಮ್ಮನ್ನು ತಡೆಯುವವರು ಯಾರೂ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.