ದಿಗಂತವರದಿ ಶಿವಮೊಗ್ಗ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಬುಧವಾರ ದೆಹಲಿಗೆ ತೆರಳುತ್ತಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಂಗಳವಾರ ಬೆಳಿಗ್ಗೆ ದೇಶದ ಗೃಹ ಮಂತ್ರಿ, ಉಕ್ಕಿನ ಮನುಷ್ಯ ಅಮಿತ್ ಶಾ ದೂರವಾಣಿ ಕರೆ ಮಾಡಿದ್ದರು. ಪಕ್ಷದ ಹಿರಿಯ ನಾಯಕರು ನೀವು. ಯಾಕೆ ಸ್ಪರ್ಧೆ ಮಾಡಲು ಮುಂದಾಗಿದ್ದೀರಿ ಎಂದು ಕೇಳಿದರು. ಅವರಿಗೆ ಸ್ಪಷ್ಟವಾಗಿ ಹೇಳಿದ್ದೀನಿ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಇದೆ. ಕರ್ನಾಟಕ ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿ ಸಿಲುಕಿದೆ. ಅದನ್ನು ಮುಕ್ತಿ ಮಾಡಬೇಕು. ಸಾಕಷ್ಟು ಕಾರ್ಯಕರ್ತರು ಇವರಿಂದಾಗಿ ನೊಂದಿದ್ದಾರೆ. ಅವರಿಗಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದೇನೆ ಎಂದರು.
ಅದಕ್ಕೆ ಅಮಿತ್ ಶಾ ಅವರು ನಿಮ್ಮ ನಿರ್ಧಾರ ವಾಪಸ್ ತೆಗೆದುಕೊಳ್ಳಿ. ಮುಂದೆ ವ್ಯವಸ್ಥೆ ಸರಿ ಮಾಡೋಣ. ನಾಳೆ ದೆಹಲಿಗೆ ಬರಬೇಕು ಎಂದು ಹೇಳಿದ್ದಾರೆ. ಆದರೆ ಮೂರು ತಿಂಗಳ ಹಿಂದೆ ನಿಮ್ಮ ಬಳಿ ಮಾತನಾಡಿದ್ದೆ. ಆದರೆ ಬದಲಾವಣೆ ಆಗಿಲ್ಲ ಎಂದು ತಿಳಿಸಿದ್ದೇನೆ. ನಿಮ್ಮ ಬಳಿ ಸ್ಪರ್ಧೆ ಮಾಡದಂತೆ ಪ್ರಾರ್ಥನೆ ಮಾಡ್ತೀನಿ ಎಂದು ಹೇಳಿದರು. ಅಂತಹ ಮಾತುಗಳನ್ನು ಆಡದಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.