ಹೊಸದಿಗಂತ ವರದಿ, ಬಳ್ಳಾರಿ:
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಭೇಟಿ ನೀಡಿದ ಚುನಾಚಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮೀತ್ ಶಾ ಜೀ ಅವರು, ಪಟ್ಟಣದ ಶಿವಲೀಲಾ ಗೆಸ್ಟ್ ಹೌಸ್ ನಲ್ಲಿ ಗುರುವಾರ ಕಲಬುರ್ಗಿ ವಲಯ ವ್ಯಾಪ್ತಿಯ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಪ್ರಮುಖರ ಸಭೆ ನಡೆಸಿದರು.
ಅರ್ಧಗಂಟೆಗೂ ಹೆಚ್ಚು ವ್ಯಾಪ್ತಿಯ ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಸೇರಿದಂತೆ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿ, ಮುಂಬರುವ ಚುನಾವಣೆಯಲ್ಲಿ 140+ ಸ್ಥಾನಗಳನ್ನು ಗೆಲ್ಲಬೇಕು, ಪ್ರತಿಯೋಬ್ಬರೂ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಚುನಾಚಣೆ ಎದುರಿಸಲು ಸಿದ್ದರಾಗಿ ಎಂದು ಅಮೀತ್ ಶಾ ಅವರು, ಖಡಕ್ ಸಂದೇಶ ರವಾನಿಸಿದ್ದಾರೆ.
ಈ ಹಿಂದೆ ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮೀ ಅವರು ಸಂಡೂರಿಗೆ ಭೇಟಿ ನೀಡಿ ನಿಯೋಜಿತ ಅಭ್ಯರ್ಥಿ ಅವರ ನಿವಾಸದಲ್ಲಿ ತಂಗಿ ಚುನಾವಣೆ ತಂತ್ರಗಾರಿಕೆ, ಗೆಲುವುಗಾಗಿ ರಣತಂತ್ರ ರೂಪಿಸಿದ್ದರು.ಇದರ ಬೆನ್ನಲ್ಲೇ ಬಿಜೆಪಿಯ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮೀತ್ ಶಾ ಜೀ ಅವರು, ನಾಲ್ಕೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಡೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ವಿಜಯ ಸಂಕಲ್ಪ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿರುವುದು ನಾಲ್ಕೂ ಜಿಲ್ಲೆಗಳ ಬಿಜೆಪಿ ಪಾಳೆಯಕ್ಕೆ ಮತ್ತಷ್ಟು ಬಲ ಹೆಚ್ಚಿಸಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೀ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಆನಂದ್ ಸಿಂಗ್, ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ ಸೇರಿದಂತೆ ಮುಂತಾದವರೊಂದಿಗೆ ಅಮೀತ್ ಶಾ ಜೀ ಅವರು ಶಿವಲೀಲಾ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಸಿದರು. ಪಕ್ಷ ಬಲವರ್ಧನೆಗೆ ಮೊದಲ ಆದ್ಯತೆ ನೀಡಬೇಕು, 140+ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲೇಬೇಕು ಎಂದು ರಾಜ್ಯ ಹಾಗೂ ಸ್ಥಳೀಯ ನಾಯಕರಿಗೆ ಅಮೀತ್ ಶಾ ಜೀ ಅವರು ಖಡಕ್ ಸೂಚನೆ ನೀಡಿದ್ದಾರೆ. ರಾಷ್ಟ್ರ ನಾಯಕ, ಚುನಾವಣಾ ಚಾಣಕ್ಯ ಅಮೀತ್ ಶಾ ಅವರನ್ನು ನೋಡಲು ಪಕ್ಷದ ಜಿಲ್ಲಾ ನಾಯಕರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.