ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನಗಳ ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೋಟ್ ಆಂಬುಲೆನ್ಸ್ ಹಾಗೂ ಆರು ತೇಲುವ ಗಡಿರಕ್ಷಣಾ ಹೊರಠಾಣೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇದರ ಜೊತೆಗೆ ಹರಿದಾಸ್ ಪುರ ಜಿಲ್ಲೆಯಗಡಿಯಲ್ಲಿ ಮೈತ್ರಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಿಂಗಲ್ ಕುಂಜ್ ನಲ್ಲಿ ಲೋಕಾರ್ಪಣೆ ಗೊಳಿಸಿದ ಶಾ “ಗಡಿ ಭಾಗದಲ್ಲಿನ ಗಸ್ತಿಗೆ ತೇಲುವ ಠಾಣೆಗಳು ಬಲ ತುಂಬಲಿದ್ದು ಅಕ್ರಮ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವಲ್ಲಿ ಸಹಾಯಕ ವಾಗಿದೆ. ಹೆಚ್ಚು ಜಲಾವೃತ ಪ್ರದೇಶಗಳಾದ ಸುಂದರ್ ಬನ್ ಪ್ರದೇಶದಲ್ಲಿ ತೇಲುವ ಠಾಣೆಗಳು ಗಡಿ ರಕ್ಷಣಾ ಪಡೆಗಳಿಗೆ ಬಲ ತುಂಬಲಿವೆ ಹಾಗೂ ಅಕ್ರಮ ಸಾಗಾಟವನ್ನು ತಡೆಯಲು ಸಹಾಯಕವಾಗಿವೆ. ಸುಂದರ್ ಬನ್ ದಂತಹ ದುರ್ಗಮ ಪ್ರದೇಶದಲ್ಲಿ ಬೋಟ್ ಆಂಬುಲೆನ್ಸ್ ಉತ್ತಮ ಆರೊಗ್ಯ ಸೇವೆ ಒದಗಿಸುತ್ತದೆ” ಎಂದು ಹೇಳಿದ್ದಾರೆ.
ಸುಂದರ್ ಬನ್ ಪ್ರದೇಶದಿಂದಲೇ ಹೆಚ್ಚು ನುಸುಳುಕೋರರು ಒಳಗೆ ಬರುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಪ್ರಸ್ತುತ ಆ ಭಾಗದಲ್ಲಿಯೇ ಹೆಚ್ಚಿನ ನಿಗಾ ವಹಿಸಿ ಅಕ್ರಮ ನುಸುಳುಕೋರರನ್ನು ಸಮರ್ಥವಾಗಿ ತಡೆಗಟ್ಟಲು ಈ ರೀತಿಯ ತೇಲುವ ಗಡಿ ರಕ್ಷಣಾ ಠಾಣೆಗಳನ್ನು ತೆರೆಯಲಾಗಿದೆ.