ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲದಲ್ಲಿ ಪ್ರಪಂಚದ ಶ್ರೀಮಂತ ರಾಷ್ಟ್ರವಾಗಿದ್ದ ಭಾರತ ನಂತರದಲ್ಲಿ ಪರಕೀಯರ ದಾಳಿಗೆ ಸಿಕ್ಕು ನಲುಗಿಹೋಯಿತು. ಬ್ರೀಟೀಷರ ಕಬಂಧ ಬಾಹುಗಳಿಂದ ಹೊರಬರುವ ಹೊತ್ತಿಗೆ ಹೊತ್ತಿನ ಊಟಕ್ಕೂ ದೇಶದಲ್ಲಿ ಪರದಾಡಬೇಕಿದ್ದ ಪರಿಸ್ಥಿತಿಯಿತ್ತು. ಆದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವ ಹೊತ್ತಿಗೆ ದೇಶದ ಜ್ವಲಂತ ಸಮಸ್ಯೆಗಳನ್ನೆಲ್ಲ ದೂರ ಮಾಡಿ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭಿಸಲಾಗಿದೆ. ಇಂತಹ ಹಲವು ಸಾಧನೆಗಳಲ್ಲಿ ದೇಶದಲ್ಲಿ ಮರಣ ಪ್ರಮಾಣವನ್ನು ಇಳಿಸಿದ್ದು ಕೂಡ ಒಂದು.
ಸ್ವಾತಂತ್ರ್ಯದ ಬಂದ ಪ್ರಾರಂಭದಲ್ಲಿ ದೇಶದಲ್ಲಿ ಸರಿಯಾದ ಆರೋಗ್ಯ ವ್ಯವಸ್ಥೆಗಳೇ ಇರಲಿಲ್ಲ. ಹೀಗಾಗಿ ದೇಶದಲ್ಲಿ ಆರೈಕೆ ಸರಿಯಾಗಿ ಸಿಗದೇ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಿತ್ತು. 1951ರಲ್ಲಿ 27.4ರಷ್ಟಿ ಮರಣ ದರವು ದಾಖಲಾಗಿತ್ತು. ಆದರೆ ನಂತರದಲ್ಲಿ ಆರೋಗ್ಯ ಸುಧಾರಣೆಗೆ ವ್ಯಾಪಕ ಕ್ರಮ ವಹಿಸಲಾಯಿತು. ಪ್ರತಿ ಗ್ರಾಮೀಣ ಪ್ರದೇಶದಲ್ಲಿಯೂ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಯಿತು. ಸರ್ಕಾರಿ ಆಸ್ಪತ್ರೆಗಳ ಸ್ಥಾಪನೆ, ಆಶಾಕಾರ್ಯಕರ್ತೆಯರಂತಹ ಆರೋಗ್ಯ ಕಾರ್ಯಕರ್ತರುಗಳ ಮೂಲಕ ಆರೋಗ್ಯದ ಬಗ್ಗೆ ವಿಶೇಷ ಒತ್ತು ನೀಡಲಾಯಿತು. ಪರಿಣಾಮ ಮರಣ ಪ್ರಮಾಣದಲ್ಲೂ ಇಳಿಕೆ ದಾಖಲಾಗಿದೆ. 2020ರ ವೇಳೆಗೆ ಮರಣ ಪ್ರಮಾಣವು ಗಣನೀಯವಾಗಿ ಕುಸಿದು 6ಕ್ಕೆ ಬಂದು ನಿಂತಿದೆ.