ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಷ ಪ್ರಾಶನಗೈದು ಹತ್ತಕ್ಕೂ ಅಧಿಕ ಶ್ವಾನಗಳನ್ನು ಕೊಲೆಗೈದ ಅಮಾನುಷ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಅಗರಿ- ಹುರ್ತಾಜೆ ರಸ್ತೆಯಲ್ಲಿ ಸತ್ತು ಬಿದ್ದಿರುವ ಶ್ವಾನಗಳು ಎಂಥಾ ಕಲ್ಲು ಹೃದಯವನ್ನೂ ಕರಗಿಸುತ್ತದೆ. ಸ್ಥಳೀಯರ ಶಂಕೆಯಂತೆ ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಆಹಾರದಲ್ಲಿ ವಿಷ ಬೆರೆಸಿ ಅಲ್ಲಲ್ಲಿ ಎಸೆದುಹೋಗಿದ್ದಾರೆ. ಹೊಟ್ಟೆ ಹಸಿವು ತಣಿಸಿಕೊಳ್ಳುವ ಆತುರದಲ್ಲಿ ಇದನ್ನು ಅರಿಯದೆ ತಿಂದ ಶ್ವಾನಗಳು ದಾರುಣವಾಗಿ ಸಾವನ್ನಪ್ಪಿವೆ. ಮೃತಪಟ್ಟವುಗಳ ಪೈಕಿ ಸಾಕು ನಾಯಿಗಳೂ ಸೇರಿವೆ.
ತಡರಾತ್ರಿ ಈ ದಾರಿಯಲ್ಲಿ ಸಂಚರಿಸುತ್ತಿದ್ದವರಿಗೆ ಇದು ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದಾಗ ಇನ್ನೂ ಕೆಲ ಮನೆಗಳ ಅಂಗಳದಲ್ಲಿ ಶ್ವಾನಗಳು ಸತ್ತು ಬಿದ್ದಿರುವುದು ಕಂಡು ಬಂತು. ಇದೀಗ ಶ್ವಾನಗಳ ಮೃತದೇಹಗಳನ್ನು ಪಂಚಾಯತ್ ವತಿಯಿಂದ ದಫನ ಮಾಡಲಾಗಿದೆ.