ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನ ಕುಟ್ಟ ಸಮೀಪದ ಚೂರಿಕಾಡುವಿನಲ್ಲಿ ಒಂದೇ ಕುಟುಂಬದ ಇಬ್ಬರನ್ನು ಬಲಿ ತೆಗೆದುಕೊಂಡ ನರಹಂತಹಕ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.
ನಾಲ್ಕು ಸಾಕಾನೆಗಳ ಸಹಾಯದೊಂದಿಗೆ 150ಕ್ಕೂ ಅಧಿಕಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಈ ಹಿನ್ನೆಲೆಯಲ್ಲಿ ರೈತರು ಹಾಗೂ ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಸೋಮವಾರ ಮೃಪಟ್ಟ ರಾಜು ಕುಟುಂಬಕ್ಕೆ ಸದ್ಯ ಐದು ಲಕ್ಷ ಪರಿಹಾರ ಚೆಕ್ ವಿತರಿಸಲಾಗಿದ್ದು, ಉಳಿದ 10 ಲಕ್ಷ ಪರಿಹಾರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದೆಂದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ನಿರಂಜನಮೂರ್ತಿ ಅವರು ತಿಳಿಸಿದ್ದಾರೆ.
ಸದನದಲ್ಲೂ ಪ್ರಸ್ತಾಪ: ಸೋಮವಾರ ಆರಂಭವಾದ ಬಜೆಟ್ ಅಧಿವೇಶನ ಕಲಾಪದ ಶೂನ್ಯ ವೇಳೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕೊಡಗಿನಲ್ಲಿ ಹುಲಿ ದಾಳಿ ಕುರಿತು ಗಮನಸೆಳೆದರು.
ನಮ್ಮಭಾಗದಲ್ಲಿ ಹುಲಿ ದಾಳಿ ಮಿತಿ ಮೀರುತ್ತಿದೆ. ಜನರ ಸಾವಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಇಷ್ಟಾದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅಪ್ಪಚ್ಚು ರಂಜನ್ ಹಾಗೂ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಅವರುಗಳೂ ಇದಕ್ಕೆ ಧ್ವನಿಗೂಡಿಸಿ ಅರಣ್ಯ ಇಲಾಖೆಯ ಬೇಜವಾಬ್ದಾರಿ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ನರಹಂತಕ ಹುಲಿಗೆ ಗುಂಡಿಕ್ಕಲು ಅನುಮತಿ ನೀಡಲಾಯಿತು.