ಹೊಸದಗಿಂತ ವರದಿ, ಅಂಕೋಲಾ:
ಯುವಕನೋರ್ವನ ಮೃತ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪಟ್ಟಣದ ಕೋಟೆವಾಡದ ಮಾರುತಿ ದೇವಾಲಯದ ಬಳಿ ಪತ್ತೆಯಾಗಿದೆ.
ಉತ್ತರ ಪ್ರದೇಶ ಮೂಲದ ಸೊಹೆಲ್ ಅಹ್ಮದ್ (23) ಎಂಬಾತ ಮೃತ ವ್ಯಕ್ತಿಯಾಗಿದ್ದು ಈತ ಅಂಕೋಲಾ ಪಟ್ಟಣದ ಕಾಕರಮಠದಲ್ಲಿ ಹೇರ್ ಕಟಿಂಗ್ ಅಂಗಡಿಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ.
ಹಾಲಿ ತನ್ನ ಸಹೋದರ ಸೇರಿದಂತೆ ಸಹೋದ್ಯೋಗಿಗಳ ಜೊತೆಗೆ ಕಾಕರಮಠದಲ್ಲಿ ವಾಸವಾಗಿದ್ದ ಈತ ಶನಿವಾರ ಬೆಳಿಗ್ಗೆ 5.30 ರ ಸುಮಾರಿಗೆ ತನ್ನ ರೂಮಿನಿಂದ ಹೊರಗೆ ಹೋಗಿದ್ದು ಕೋಟೆವಾಡದ ಮಾರುತಿ ದೇವಸ್ಥಾನದ ಎದುರಿನಿಂದ ಕೆ.ಎಲ್. ಇ ಆಸ್ಪತ್ರೆಗೆ ಸಾಗುವ ಕಾಲುದಾರಿಯ ಪಕ್ಕದ ಸಾಗವಾನಿ ಮರಕ್ಕೆ ನೈಲನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತ ದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಮೊಬೈಲ್ ಮೂಲಕ ವಿಡಿಯೋ ಹಂಚಿಕೊಂಡಿದ್ದು ಸಾವಿನ ಕುರಿತಂತೆ ನಿಖರ ಕಾರಣಗಳು ತಿಳಿದು ಬರಬೇಕಿದೆ.
ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್, ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ