ಹೊಸದಿಗಂತ ವರದಿ ಯಲ್ಲಾಪುರ:
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಬಳಿ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬುಧವಾರ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ನಡೆದಿದೆ.
ಈ ಲಾರಿ ಮಂಗಳೂರಿಗೆ ಕಬ್ಬಿಣದ ರಾಡ್ ಹೊತ್ತೊಯ್ಯುತ್ತಿತ್ತು. ಚಲಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಹೆಚ್ಚಿನ ಅವಘಡವಾಗುವುದು ತಪ್ಪಿದೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲಿನರ್ ಅಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ಲಾರಿ- ಟ್ಯಾಂಕರ್ಗಳು ಪದೇ ಪದೇ ಅಗ್ನಿ ದುರಂತಕ್ಕೆ ಒಳಗಾಗುತ್ತಿರುವುದು ಆತಂಕ, ಭೀತಿಗೆ ಕಾರಣವಾಗಿದೆ.