ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ 28 ರನ್ಗಳಿಂದ ಸೋತು ಮುಜುಗರಕ್ಕೆ ಒಳಗಾಗಿದ್ದ ಟೀಂ ಇಂಡಿಯಾಕ್ಕೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.
ವಿಶಾಖಪಟ್ಟಣದಲ್ಲಿ ನಡೆಯಲ್ಲಿರುವ ಎರಡನೇ ಟೆಸ್ಟ್ ಪಂದ್ಯದಿಂದ ತಂಡದ ಇಬ್ಬರು ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ.
ಸ್ವತಃ ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಏಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೊಳಗಾಗಿದ್ದ ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ವಾಸ್ತವವಾಗಿ ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನ ನಾಲ್ಕನೇ ದಿನದಾಟದಂದು ರವೀಂದ್ರ ಜಡೇಜಾ ಇಂಜುರಿಗೆ ಒಳಗಾಗಿದ್ದರು. ಭಾರತದ ಎರಡನೇ ಇನ್ನಿಂಗ್ಸ್ ವೇಳೆ ರನ್ಗಾಗಿ ಓಡುತ್ತಿದ್ದ ಜಡೇಜಾ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಎಸೆದ ಅದ್ಭುತ ಥ್ರೋನಿಂದಾಗಿ ರನೌಟ್ಗೆ ಬಲಿಯಾಗಿದ್ದರು. ಅಲ್ಲದೆ ಆ ವೇಳೆ ಜಡೇಜಾ ಮಂಡಿರಜ್ಜು ಸಮಸ್ಯೆಗೂ ಒಳಗಾಗಿದ್ದರು. ಇವರೊಂದಿಗೆ ಕೆಎಲ್ ರಾಹುಲ್ ಕೂಡ ತಮ್ಮ ಬಲತೊಡೆಯಲ್ಲಿನ ನೋವಿನಿಂದ ಬಳಲುತ್ತಿದ್ದು, ಈ ಇಬ್ಬರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇಂಗ್ಲೆಂಡ್ ಲಯನ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್ಗೆ ಕೊನೆಗೂ ಟೀಂ ಇಂಡಿಯಾದ ಕದ ತೆರೆದಿದೆ. ರಾಹುಲ್ ಬದಲಿಗೆ ಸರ್ಫರಾಜ್ ಖಾನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹಾಗೆಯೇ ಆಲ್ರೌಂಡರ್ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರಿಬ್ಬರಲ್ಲದೆ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನವೇ ತಂಡದಿಂದ ಬಿಡುಗಡೆಯಾಗಿದ್ದ ವೇಗಿ ಅವೇಶ್ ಖಾನ್ ಬದಲಿಯಾಗಿ ಸೌರಭ್ ಕುಮಾರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.