ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬಿನ ಲುಧಿಯಾನ (Ludhiana) ಸಂಸದ ರವನೀತ್ ಸಿಂಗ್ ಬಿಟ್ಟೂ ಮಂಗಳವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ನಂತರ ಬಿಟ್ಟೂ ಅವರು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದು, ಪ್ರಧಾನಿ ಮೋದಿಯವರು ಪಂಜಾಬ್ನ ಮೇಲೆ ಹೆಚ್ಚಿನ ಪ್ರೀತಿಯನ್ನು ತೋರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞನಾಗಿದ್ದೇನೆ.ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರು ಪಂಜಾಬ್ನ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಅವರು ರಾಜ್ಯಕ್ಕಾಗಿ ಬಹಳಷ್ಟು ಮಾಡಲು ಬಯಸುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಪಂಜಾಬ್ ಯಾಕೆ ಹಿಂದುಳಿಯಬೇಕು? ಎಂದು ಬಿಟ್ಟೂ ಕೇಳಿದ್ದಾರೆ.
ರಾಜ್ಯದಲ್ಲಿ ಭಯೋತ್ಪಾದನೆಯ ಕರಾಳ ದಿನಗಳನ್ನು ನೆನಪಿಸಿಕೊಂಡ ಅವರು, ಶಾಂತಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಮತ್ತು ಆರ್ಎಸ್ಎಸ್ ಪಾತ್ರವನ್ನು ಶ್ಲಾಘಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಸಂಸದ ಬಿಜೆಪಿ ಸೇರಿದ್ದಾರೆ.
ಬಿಟ್ಟೂ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 76,372 ಮತಗಳಿಂದ ಲೋಕ್ ಇನ್ಸಾಫ್ ಪಕ್ಷದ ಸಿಮರ್ಜೀತ್ ಸಿಂಗ್ ಬೈನ್ಸ್ ಅವರನ್ನು ಸೋಲಿಸಿದರು. 2014 ರಲ್ಲಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹರ್ವಿಂದರ್ ಸಿಂಗ್ ಫೂಲ್ಕಾ ಅವರನ್ನು 19,709 ಮತಗಳ ಅಂತರದಿಂದ ಸೋಲಿಸಿದ್ದರು.