ಹೊಸದಿಗಂತ ವರದಿ,ಮಂಗಳೂರು:
ಮಂಗಳೂರಿನಲ್ಲಿ ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ನಗರದಲ್ಲಿ ಸದ್ದಿಲ್ಲದೆ ಮತಾಂತರ ನಡೆಯುತ್ತಿರುವುದಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ.
ಮನೆಗೆಲಸಕ್ಕಿದ್ದ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇರೆಗೆ ಮಂಗಳೂರಿನ ಪ್ರಸಿದ್ಧ ಹೆರಿಗೆ ತಜ್ಞೆ ಸೇರಿದಂತೆ ಮೂರು ಮಂದಿಯ ವಿರುದ್ಧ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಲೀಲ್ ಎಂಬಾತ ಕೆಲಸ ಹಾಗೂ ಹಣದ ಆಮಿಷವೊಡ್ಡಿ ಮತಾಂತರ ಮಾಡಿದ್ದಲ್ಲದೆ ಜೀವ ಬೆದರಿಕೆ ಒಡ್ಡಿರುವುದಾಗಿ ನೊಂದ ೨೦ರ ಹರೆಯದ ಯುವತಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಮೊಬೈಲ್ ರಿಚಾರ್ಜ್ಗೆ ಅಂಗಡಿಗೆ ಬರುತ್ತಿದ್ದ ಮಂಗಳೂರು ನಗರದ ಯುವತಿಯೊಬ್ಬಳಿಗೆ ಕೆಲಸ ನೀಡುವುದಾಗಿ ಪುಸಲಾಯಿಸಿದ ಅನ್ಯಕೋಮಿನ ಬೂತ್ ಮಾಲೀಕ ಖಲೀಲ್ ಎಂಬಾತ ಕಲ್ಲಾಪಿನ ತನ್ನ ಕುಟುಂಬಸ್ಥರಲ್ಲಿ ಮನೆ ಕೆಲಸಕ್ಕೆ ಸೇರಿಸಿ ಮತಾಂತರ ಮಾಡಿರುವ ಬಗ್ಗೆ ಯುವತಿ ದೂರು ನೀಡಿದ್ದಾಳೆ. ನೊಂದ ಯುವತಿ ನೀಡಿದ ದೂರಿನಂತೆ ಪೊಲೀಸರು ಐಪಿಸಿ 354, 354(ಎ), 505, 34 ಹಾಗೂ ಕರ್ನಾಟಕ ಮತಾಂತರ ನಿಷೇಧ ಕಾಯಿದೆ 2022ರ ಕಲಂ 3 ಮತ್ತು 5 ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.